ಕಳೆದ ಎರಡು ವರ್ಷಗಳಿಂದ ತಮಿಳು ಚಿತ್ರರಂಗಕ್ಕೆ ಬೆನ್ನುಮಾಡಿದ್ದ ನಟಿ ಶ್ರುತಿ ಹಾಸನ್ ಈಗ ಕಾಲಿವುಡ್ಗೆ ಮರಳಿದ್ದಾರೆ. ವಿಶಾಲ್ ಕೃಷ್ಣ ರೆಡ್ಡಿ ನಾಯಕರಾಗಿರುವ ‘ಪೂಜೈ’ ಚಿತ್ರದಲ್ಲಿ ಶ್ರುತಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.
2011ರಲ್ಲಿ ತೆರೆಕಂಡಿದ್ದ ‘7ದೇ ಅರಿವು’ ಮತ್ತು 2012ರಲ್ಲಿ ಬಿಡುಗಡೆಯಾಗಿದ್ದ ‘ಥ್ರೀ’ ಚಿತ್ರದಲ್ಲಿ ಶ್ರುತಿ ನಟಿಸಿದ್ದರು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ನಂತರ ಶ್ರುತಿ ಮತ್ತಿನ್ಯಾವ ತಮಿಳು ಚಿತ್ರದಲ್ಲೂ ನಟಿಸಿರಲಿಲ್ಲ.
‘ಪೂಜೈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ತುಂಬ ಖುಷಿಯಾಗುತ್ತದೆ. ಅದಕ್ಕೆ ವಿಶೇಷ ಕಾರಣವೂ ಇದೆ; ನಾನು ಈ ಚಿತ್ರದ ಮೂಲಕ ಮತ್ತೇ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದೇನೆ. ಈ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ದೊರಕಿಸಿಕೊಟ್ಟಿದ್ದಕ್ಕೆ ವಿಶಾಲ್ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಶ್ರುತಿ.
‘ನಾನು ಮಲ್ಟಿ ಕಲ್ಚರ್ ಫ್ಯಾಮಿಲಿಯಿಂದ ಬಂದವಳು. ಭಾರತೀಯ ಚಿತ್ರರಂಗದ ಹಿನ್ನೆಲೆಯೂ ನನಗಿದೆ. ಹಾಗಾಗಿ, ಯಾವುದೇ ಒಂದು ಭಾಷೆಯ ನಟಿಯಾಗಿ ಉಳಿದುಕೊಳ್ಳುವುದು ನನಗೆ ಇಷ್ಟವಿಲ್ಲ. ಎಲ್ಲ ಭಾಷೆಯ ಚಿತ್ರಗಳಲ್ಲೂ ನಟಿಸುತ್ತೇನೆ’ ಎಂಬುದು ನಟ ಕಮಲ್ ಹಾಸನ್ ಹಾಗೂ ಸಾರಿಕಾ ಪುತ್ರಿಯ ಮಾತು.