ಭಾರತ, ಬಾಂಗ್ಲಾ, ಶ್ರೀಲಂಕಾ ದೇಶಗಳಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಕುತೂಹಲ ಪರಾಕಾಷ್ಠೆ ತಲುಪಿದ್ದರೆ, ಇತ್ತ ಕ್ರೀಡಾಭಿಮಾನಿಗಳನ್ನು ರಂಜಿಸಲು ರಾಕ್ ಸಂಗೀತ ತಂಡವೂ ಸಿದ್ಧವಾಗುತ್ತಿದೆ.ಅಂತರರಾಷ್ಟ್ರೀಯ ಹಣ ವರ್ಗಾವಣೆ ಕಂಪೆನಿ ‘ಮನಿಗ್ರಾಮ್’ ಏ. 2 ರಂದು ಮುಂಬೈಯಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ಫ್ಯೂಷನ್ ರಸಧಾರೆ ಹರಿಸಲು ಮೂರೂ ದೇಶಗಳ ಒಂಬತ್ತು ತಂಡಗಳನ್ನು ತಯಾರು ಮಾಡುತ್ತಿದೆ.
ಇವು ‘ಶಾಂತಿಗಾಗಿ ಕ್ರಿಕೆಟ್’ ಎಂಬ ಧ್ಯೇಯದೊಂದಿಗೆ ಸಂಗೀತ ರಸದೌತಣ ನೀಡಲಿವೆ. ಇದಕ್ಕಾಗಿ ಅಹಮದಾಬಾದ್, ಕೋಲ್ಕತ್ತ, ಚೆನ್ನೈ, ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆ ಪೂರ್ವಭಾವಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಂತಿಮವಾಗಿ ಇದರಲ್ಲಿ ಮೂರು ತಂಡಗಳು ಭಾರತವನ್ನು ಪ್ರತಿನಿಧಿಸಲಿವೆ. ಈ ವಿಜೇತ ಗಾಯಕರು ಸಂಗೀತ ಆಲ್ಬಂನಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನ ತಂಡಗಳ ಸಂಗೀತ ಸಂಯೋಜನೆಯನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದೆ. ವರ್ಟಿಕಲ್ ಸ್ಕಾರ್, ಎಲಿಸಿಯಂ, ಚಿಮೆರಾ, ಬ್ಲಾಕ್ಸನ್ ಮತ್ತು ಆಲ್ಟರ್ಡ್ ಸ್ಕೇಲ್ಸ್ ಎಂಬ ಹೆಸರಿನ ಈ ತಂಡಗಳು ನಗರದ ಹೋಟೆಲೊಂದರಲ್ಲಿ ಫ್ಯೂಷನ್ ಬ್ಯಾಂಡ್ ಸಂಗೀತ ಪ್ರದರ್ಶಿಸಿದವು. ಆಲ್ಟರ್ಡ್ ಸ್ಕೇಲ್ಸ್ ಪಾಶ್ಚಾತ್ಯ ಸಂಗೀತದ ಜೊತೆಗೆ ಹಿಂದೂಸ್ತಾನಿ ಸಂಗೀತವನ್ನು ಮಿಶ್ರಣ ಮಾಡಿ ಹಾಡಿದ ಗೀತೆ ಗಮನ ಸೆಳೆಯಿತು. ಇನ್ನುಳಿದ ತಂಡಗಳ ಕಲಾವಿದರು ತಾವೇ ಸಂಯೋಜಿಸಿದ ರಾಕ್ ಸಂಗೀತವನ್ನು ಇಂಪಾಗಿ ಹಾಡಿ, ನುಡಿಸಿದರು.
ಈ ಹಂತದಲ್ಲಿ ವಿಜೇತರಾಗುವ ತಂಡಗಳು ಮನಿಗ್ರಾಮ್ ಶಾಂತಿಗಾಗಿ ಕ್ರಿಕೆಟ್ ಮ್ಯೂಸಿಕ್ ಆಲ್ಬಂಗೆ ಪ್ರವೇಶ ಪಡೆಯಲಿವೆ. ಏ.1 ರಂದು ಮುಂಬೈನಲ್ಲಿ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅಂದು ‘ಶಾಂತಿಗಾಗಿ ಕ್ರಿಕೆಟ್’ ಸಂದೇಶದ ಸಂಗೀತ ಧಾರೆ ಹರಿಸಲಿದೆ. ಇದು ಹಿಂದಿ, ಇಂಗ್ಲಿಷ್, ಬಾಂಗ್ಲಾ, ಸಿಂಹಳಿ ಭಾಷೆಯಲ್ಲಿರುತ್ತದೆ. ಒಟ್ಟಾರೆ ಕ್ರಿಕೆಟ್ ಪ್ರೇಮಿಗಳಿಗೆ ರನ್ ಮಳೆಯ ಜೊತೆಗೆ ಸಂಗೀತದ ಇಂಪು ಕೂಡಾ ರಂಜಿಸಲಿದೆ.