ಬೆಳಗಾವಿ: ‘ಕಾವೇರಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿಯಲ್ಲಿ ರಾಜ್ಯದ ಪರ ವಾದ ಮಂಡಿಸಲು ಹಾಜರಾದ ವಕೀಲರಿಗೆ ಇದುವರೆಗೆ ಸರ್ಕಾರ ಒಟ್ಟು ₹ 76.21 ಕೋಟಿ ಶುಲ್ಕ ಪಾವತಿಸಿದೆ. ಇಷ್ಟೊಂದು ಹಣ ಪಾವತಿಸಿದ್ದರೂ ರಾಜ್ಯದ ಪರ ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾಗಿರುವ ವಕೀಲರ ತಂಡವನ್ನು ಬದಲಾಯಿಸುವುದು ಲೇಸು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಜಿ. ಗಡಾದ ಹೇಳಿದರು.
ಈ ಎರಡೂ ನದಿಗಳ ಜಲವಿವಾದಕ್ಕೆ ಸಂಬಂಧಿಸಿದಂತೆ ಅನಿಲ್ ದಿವಾನ್ ಹಾಗೂ ಫಾಲಿ ಎಸ್. ನಾರಿಮನ್ ನೇತೃತ್ವದ 21 ಜನ ವಕೀಲರ ತಂಡವು ರಾಜ್ಯದ ಪರ ವಾದ ಮಂಡಿಸಿತ್ತು. ಕಾವೇರಿ ಹಾಗೂ ಕೃಷ್ಣಾ ಜಲ ನ್ಯಾಯಮಂಡಳಿ ರಚನೆಯಿಂದ ರಾಜ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ. ಇಲ್ಲಿನ ಕೃಷಿಗೆ ನೀರು ದೊರಕುತ್ತಿಲ್ಲ. ಕುಡಿಯುವ ನೀರಿಗೂ ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ. ರಾಜ್ಯದ ಪರ ವಾದ ಮಂಡಿಸುವಲ್ಲಿ ವಿಫಲರಾಗಿದೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾವೇರಿ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ₹36.52 ಕೋಟಿ ಮತ್ತು ಕೃಷ್ಣಾ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ₹39.69 ಕೋಟಿ ಶುಲ್ಕ ಪಾವತಿಸಲಾಗಿದೆ. ಇದಲ್ಲದೇ, ಮಹಾದಾಯಿ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಲು ಇದೇ ತಂಡಕ್ಕೆ ₹ 9.80 ಕೋಟಿ ಶುಲ್ಕ ಪಾವತಿಸಲಾಗಿದೆ ಎಂದು ಅವರು ಸ್ಮರಿಸಿದರು.
ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಶುಲ್ಕ ಪಡೆದ ವಕೀಲರು ಈಗ ವಾದ ಮಾಡುವುದಿಲ್ಲವೆಂದು ಹಿಂದಕ್ಕೆ ಸರಿಯುವುದು ಎಷ್ಟು ಸರಿ? ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಕೀಲರು ಹೇಳುತ್ತಿರುವುದು ಎಷ್ಟು ಸಮಂಜಸ? ವಾದ ಮಂಡಿಸಲು ಸಾಧ್ಯವಾಗದಿದ್ದರೆ ಸರ್ಕಾರದಿಂದ ಶುಲ್ಕ ರೂಪದಲ್ಲಿ ಪಡೆದ ಹಣವನ್ನು ವಾಪಸ್ ನೀಡಲಿ ಎಂದು ಒತ್ತಾಯಿಸಿದರು.