ಭಾನುವಾರ, ಮಾರ್ಚ್ 26, 2023
32 °C
ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯ

ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಿ

ಬೆಂಗಳೂರು: ‘ವೃತ್ತಿಯಲ್ಲಿರುವ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿಯನ್ನು ರೂಢಿಸಿಕೊಳ್ಳಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್‌ ಹೆಗ್ಡೆ ಹೇಳಿದರು.



ನಗರದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



‘ನ್ಯಾಯಾಂಗದ ಅಧಿಕಾರದಲ್ಲಿ ಇರುವವರನ್ನು ಕಂಡು ಜನ ಹೆದರುತ್ತಾರೆ. ಅವರನ್ನು ಗತ್ತಿನಿಂದ ಇನ್ನಷ್ಟು ಹೆದರಿಸಬಾರದು. ಬದಲಿಗೆ ಅವರೊಳಗೆ ಒಬ್ಬನಂತೆ ವರ್ತಿಸುತ್ತ, ಆಗಬಹುದಾದ ಸಹಾಯ ಮಾಡಬೇಕು’ ಎಂದರು.



‘ಲೋಕಾಯುಕ್ತ ಸಂಸ್ಥೆಗೆ ಬರುವ ಮುನ್ನ ನಾನು ಕೂಪ ಮಂಡೂಕದಂತಿದ್ದೆ. ಅಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅನೇಕ ಅನಿರೀಕ್ಷಿತ ಅನುಭವಗಳು ದೊರೆತವು. ಟೈ–ಸೂಟುಗಳನ್ನು ಧರಿಸುವುದನ್ನು ನಿಲ್ಲಿಸಿದ ನಂತರವೇ  ಸಾಮಾನ್ಯ ಜನ ನಿರ್ಭೀತಿಯಿಂದ ಮಾತನಾಡಲು ಆರಂಭಿಸಿದರು’ ಎಂದು ಅವರು ಹೇಳಿದರು.



‘ಇಂದಿನ ಜನನಾಯಕರು ತಮ್ಮನ್ನು ಸಾರ್ವಜನಿಕ ಸೇವಕರೆಂದು ತಿಳಿದಿಲ್ಲ. ಅಣ್ಣ ಹಜಾರೆಯವರ ನೇತೃತ್ವದಲ್ಲಿ ಜನಲೋಕಪಾಲ ಮಸೂದೆಯ ಕರಡನ್ನು ಸಿದ್ಧಪಡಿಸಿ ಸಂಸದರೊಬ್ಬರಿಗೆ ಕಳುಹಿಸಿದ್ದೆವು. ಅವರು ಮಸೂದೆ ರಚಿಸಲು ನೀವ್ಯಾರು ಎಂದು ಪ್ರಶ್ನಿಸಿದ್ದರು. ಆ ಕ್ಷಣಕ್ಕೆ ಅವರಿಗೆ ಜನರಿಂದ ಆಯ್ಕೆ ಆಗಿರುವ ವಿಷಯ ಮರೆತು ಹೋಗಿತ್ತೇನೊ’ ಎಂದು ಹೇಳಿದರು.



ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ವಿ.ಬಿ. ಕುಟಿನೊ ಮಾತನಾಡಿ,‘ಹಳೆ ವಿದ್ಯಾರ್ಥಿಗಳ ಸಂಘಗಳ ರಚನೆಯ ಉದ್ದೇಶ ವರ್ಷಕ್ಕೊಮ್ಮೆ ಸೇರಿ ಉಪಹಾರ–ಊಟ ಮಾಡುವುದಾಗಬಾರದು. ಬದಲಿಗೆ ಅಧ್ಯಯನ ಮಾಡಿದ ಸಂಸ್ಥೆಯ ಸ್ಥಿತಿಗತಿ ಸುಧಾರಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸಬೇಕು’ ಎಂದರು.



ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಮಾತನಾಡಿ,‘ಕಾನೂನು ಕಾಲೇಜಿಗೆ 1,500 ಸಭಿಕರು ಕೂರಬಹುದಾದ ಸಭಾಂಗಣ ಮತ್ತು ವಿದ್ಯಾರ್ಥಿ ನಿಲಯ ನಿರ್ಮಿಸಲು ಯೋಜಿಸಲಾಗಿದೆ. ಹಾಗೆಯೇ ಸ್ವಾಯತ್ತ ಸ್ಥಾನಮಾನ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.