ಸೆಪ್ಟೆಂಬರ್ ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಮ್ಮ ಸೈನ್ಯವು ‘ನಿರ್ದಿಷ್ಟ ದಾಳಿ’ ಮಾಡಿದ್ದನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡು ಬೀಗಿದ್ದೆವು. ಅದೇನು ರೋಷಾವೇಶ, ದುರಹಂಕಾರದ ಹೇಳಿಕೆಗಳು! ನಾವು ಅವರ ಮೇಲೆ ಎಂದೋ ಒಂದು ಬಾರಿ ನುಗ್ಗಿದ್ದನ್ನು ವರ್ಣರಂಜಿತವಾಗಿ ಹೇಳಿಕೊಂಡೆವು. ಆದರೆ ಪಾಕಿಸ್ತಾನಿ ಉಗ್ರರು ನೇರವಾಗಿ ನಮ್ಮ ದೇಶದೊಳಗೇ ಬಂದು ಸೇನಾ ನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದಾರೆ.
ನಮ್ಮಂಥ ನಾಗರಿಕರನ್ನು ಭದ್ರತೆಯ ಹೆಸರಿನಲ್ಲಿ ಸೇನಾ ನೆಲೆಯ ಸನಿಹಕ್ಕೂ ಸುಳಿಯಲು ಬಿಡದಷ್ಟು ‘ಭದ್ರತೆ’ ಇರುವ ಈ ನೆಲೆಗಳಿಗೆ ಉಗ್ರರು ನುಗ್ಗಲು ಹೇಗೆ ಸಾಧ್ಯವಾಗುತ್ತಿದೆ? ಕಾಣದ ಭ್ರಷ್ಟ ಕೈಗಳು ಗಡಿಯಲ್ಲಿಯೂ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪತ್ತೆ ಹಚ್ಚಬೇಕಿದೆ.
-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು