ಅಕ್ಕಪಕ್ಕ ಇರುವ ಎರಡು ದೇಶಗಳಲ್ಲಿ ವೈಷಮ್ಯ ಮೂಡಿದರೆ ಸೈನಿಕರಿಗೆ ನೆಮ್ಮದಿ ಮರೀಚಿಕೆ. ಕೆಲ ಯುದ್ಧಗಳು ಜಗತ್ತಿಗೆ ಕಾಣುವಂತೆ ನಡೆದರೆ, ಕೆಲ ಹೋರಾಟಗಳು ತೆರೆಮರೆಯಲ್ಲಿಯೇ ಮುಗಿದು ಹೋಗುತ್ತವೆ. ಯೋಧರ ತ್ಯಾಗಗಳು ಇತಿಹಾಸದಲ್ಲಿ ದಾಖಲಾಗುವುದೂ ಇಲ್ಲ.
ರಾನಾ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿರುವ ತೆಲುಗು ಚಿತ್ರ ‘ದಿ ಘಾಜಿ ಅಟ್ಯಾಕ್’ ಇಂಥ ಕಥೆಯನ್ನು ಒಳಗೊಂಡಿದೆ. ಭಾರತದ ವಿಮಾನ ವಾಹಕ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಮೇಲೆ ದಾಳಿ ನಡೆಸಲು ಪಾಕಿಸ್ತಾನ 1971ರಲ್ಲಿ ಸಬ್ಮರೀನ್ ಒಂದನ್ನು ಕಳುಹಿಸಿತ್ತು. ವಿಶಾಖಪಟ್ಟಣ ಬಂದರಿನ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವೂ ಅದಕ್ಕಿತ್ತು.
ಇದಕ್ಕೆ ಪ್ರತಿತಂತ್ರ ಹೆಣೆದ ಭಾರತದ ನೌಕಾದಳದ ಅಧಿಕಾರಿಗಳು ಎಸ್–21 ಹೆಸರಿನ ಸಬ್ಮರೀನ್ಗೆ ನೌಕೆ ಮತ್ತು ಬಂದರು ರಕ್ಷಣೆಯ ಹೊಣೆ ಹೊತ್ತರು. ಎಸ್–21ನಲ್ಲಿ 18 ದಿನ ಏನಾಯಿತು ಎಂಬುದು ‘ದಿ ಘಾಜಿ ಅಟ್ಯಾಕ್’ ಚಿತ್ರದ ಹೂರಣ.
ಜ.10ರಂದು ಯುಟ್ಯೂಬ್ಗೆ ಅಪ್ಲೋಡ್ ಆಗಿರುವ ಟ್ರೇಲರ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈವರೆಗೆ ಸುಮಾರು 50 ಲಕ್ಷ ಮಂದಿ ಟ್ರೇಲರ್ ನೋಡಿದ್ದಾರೆ. ದೇಶಭಕ್ತಿಯ ಭಾವುಕ ಡೈಲಾಗ್ ಡೆಲಿವರಿಯಲ್ಲಿ ರಾನಾ ದಗ್ಗುಬಾಟಿ ಟಫ್ ಆಗಿ ಕಂಗೊಳಿಸಿದ್ದರೆ, ದಿವಂಗತ ನಟ ಓಂಪುರಿ ಸಹ ದೃಶ್ಯವೊಂದರಲ್ಲಿ ಗಮನ ಸೆಳೆಯುತ್ತಾರೆ. ಚಿತ್ರ ಫೆ.17ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.