ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಪ್ರಭಾವ: ನಿರ್ಲಕ್ಷ್ಯಸಲ್ಲದು, ಕಟ್ಟೆಚ್ಚರ ವಹಿಸಿ

ಸಂಪಾದಕೀಯ
Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಭೋಪಾಲ್– ಉಜ್ಜಯಿನಿ ರೈಲಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಇಸ್ಲಾಮಿಕ್ ಸ್ಟೇಟ್‌ನಿಂದ (ಐಎಸ್) ಪ್ರಭಾವಿತವಾದ ಸಂಘಟನೆಯ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ನಡೆಸಿದ ಕಾರ್ಯಾಚರಣೆಯಲ್ಲಿ, ಲಖನೌ ಹೊರವಲಯದ ಮನೆಯೊಂದರಲ್ಲಿ ಅವಿತಿದ್ದ ಶಂಕಿತನನ್ನು ಗುಂಡಿಟ್ಟು ಕೊಲ್ಲಲಾಗಿದೆ. ರಾಷ್ಟ್ರದ ವಿವಿಧ  ಭಾಗಗಳಲ್ಲಿ ಈ ಹಿಂದೆ ಐಎಸ್ ಶಂಕಿತರಿಗೆ ಸಂಬಂಧಿಸಿದಂತೆ ದಾಳಿಗಳು ನಡೆದಿವೆ. ಜೊತೆಗೆ, ಐಎಸ್‌ಗೆ ಸೇರಿದ್ದ ಕೇರಳದ ವ್ಯಕ್ತಿಯೊಬ್ಬರು ಆಫ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೆ ಹತ್ಯೆಯೂ ಆಗಿದ್ದಾರೆ. ಎಂದರೆ, ಐಎಸ್ ಕುರಿತಾದ ಸೆಳೆತ ಯುವಜನರಲ್ಲಿ ಕಂಡುಬರುತ್ತಿರುವುದಕ್ಕೆ ಇಂತಹ ಕೆಲವು ಘಟನೆಗಳು ಪುಷ್ಟಿ ಒದಗಿಸುತ್ತಿವೆ.

ಭಾರತದಲ್ಲಿ ಹೆಚ್ಚಿನವರು ಅಂತರ್ಜಾಲದ ಮೂಲಕ  ಐಎಸ್ ಉಗ್ರ ಸಿದ್ಧಾಂತಗಳ ಸಂಪರ್ಕಕ್ಕೆ ಬಂದು ಅದರಿಂದ ಆಕರ್ಷಿತರಾಗುತ್ತಿದ್ದಾರೆ ಎಂಬುದು ಕಳವಳಕಾರಿ ಸಂಗತಿ. ಅಂತರ್ಜಾಲದ ಮೂಲಕ ಉಗ್ರ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗುವ ಇಂತಹ ಯುವಜನರು ಏಕಾಂಗಿಯಾಗಿಯೂ  ದಾಳಿ ನಡೆಸಲು ಮುಂದಾಗಬಹುದು. ಜಗತ್ತಿನ  ವಿವಿಧೆಡೆ ಇಂತಹ ದಾಳಿಗಳೂ ನಡೆದಿವೆ. ಹೀಗಾಗಿ ಈ ಬೆಳವಣಿಗೆ ಬಗ್ಗೆ ನಿರ್ಲಕ್ಷ್ಯ ತಾಳಲಾಗದು. ಕಳೆದ ಕೆಲ ದಿನಗಳ ಹಿಂದೆ ಗುಜರಾತ್‌ನಲ್ಲಿ ಬಂಧಿತರಾದ ಇಬ್ಬರು ಸೋದರರು ಐಎಸ್ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬಂತಹ ಆತಂಕಕಾರಿ ಅಂಶ ಬಯಲಾಗಿತ್ತು. ಆದರೆ ಈ ಸೋದರರು ದಾಳಿ ನಡೆಸುವ ಮುಂಚೆಯೇ ಬಂಧಿತರಾಗಿದ್ದರು ಎಂಬುದನ್ನೂ ಇಲ್ಲಿ ಸ್ಮರಿಸಬಹುದು.

ಇರಾಕ್ ಹಾಗೂ ಸಿರಿಯಾಗಳಲ್ಲಿ ಐಎಸ್ ನೆಲೆ ಕುಗ್ಗುತ್ತಿದೆ ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ವರದಿಗಳು ಬರುತ್ತಿವೆ. ಇಂತಹ ಸಂದರ್ಭದಲ್ಲಿ ‘ವಿದಾಯ ಭಾಷಣ’ ಮಾಡಿರುವ ಐಎಸ್ ಉಗ್ರಗಾಮಿ ಸಂಘಟನೆಯ ಸ್ವಯಂಘೋಷಿತ ಮುಖ್ಯಸ್ಥ ಅಬುಬಕರ್‌ ಅಲ್‌–ಬಾಗ್ದಾದಿ,  ‘ನಿಮ್ಮ ರಾಷ್ಟ್ರಗಳಿಗೆ ನೀವು ತಕ್ಷಣ ಹಿಂದಿರುಗಿ, ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ’ ಎಂದು ತನ್ನ ಸಂಘಟನೆಯ ಅರಬ್ಬೇತರ ಹೋರಾಟಗಾರರಿಗೆ ಸಂದೇಶ ರವಾನಿಸಿದ್ದಾನೆ. ಹೀಗಾಗಿ ತಂತಮ್ಮ ರಾಷ್ಟ್ರಗಳಿಗೆ ಹಿಂದಿರುಗುವ ಈ ತೀವ್ರಗಾಮಿಗಳಿಂದ ರಾಷ್ಟ್ರಗಳ ಭದ್ರತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.

ಆನ್‌ಲೈನ್ ಮುಖಾಂತರ ಸಕ್ರಿಯವಾಗಿ  ಕಾರ್ಯ ನಿರ್ವಹಿಸುವ  ಇಂತಹ ತೀವ್ರಗಾಮಿಗಳ  ವಿರುದ್ಧ ಭಾರತ ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಬೇಕು. ಗುಪ್ತಚರ ವಿಭಾಗವಂತೂ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಉಗ್ರ ಪ್ರೇರಿತ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವುದು ಅಗತ್ಯ. ಆದರೆ ಅನೇಕ ಸಂದರ್ಭಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ  ಮುಸ್ಲಿಂ ಯುವಕರ ಬಂಧನ ಕಾರ್ಯಾಚರಣೆಗಳು ನೀಡಿರುವ ಸಂದೇಶಗಳು ನಮ್ಮ ತನಿಖಾ ಸಂಸ್ಥೆಗಳ ದೋಷಪೂರ್ಣ ವಿಧಾನಗಳಿಗೆ ಕನ್ನಡಿ ಹಿಡಿದಿವೆ. ಮುಸ್ಲಿಂ ಯುವಕರನ್ನು ಏನೇನೋ ನೆಲೆ ಮೇಲೆ ಬಂಧಿಸಿ ದೀರ್ಘ ಕಾಲ ಜೈಲಿನಲ್ಲಿರಿಸಿ  ನಂತರ ಕೋರ್ಟ್ ನಿರ್ದೇಶನದ ಮೇಲೆ ಬಿಡುಗಡೆ ಮಾಡಿದ ಪ್ರಕರಣಗಳೂ ಸಾಕಷ್ಟಿವೆ.  ಇಂತಹ ಅನೇಕ ಪ್ರಕರಣಗಳಲ್ಲಿ ಒದಗಿಸಿದ ಸಾಕ್ಷ್ಯ ಸ್ವಕಪೋಲ ಕಲ್ಪಿತ ಆಗಿರುವುದೂ ಉಂಟು. ಭಯೋತ್ಪಾದನೆಯಂತಹ ಗಂಭೀರ ಆರೋಪದ ಬಗ್ಗೆ  ಈ ರೀತಿಯ ಬೆಳವಣಿಗೆ ತೀವ್ರವಾದ ಹಾನಿಯನ್ನು ಉಂಟುಮಾಡುವಂತಹದ್ದು. ಅಷ್ಟೇ ಅಲ್ಲ, ಐಎಸ್ ಪರ  ಪ್ರಚಾರ ಅಗತ್ಯಗಳಿಗೂ ಇದು ಮತ್ತಷ್ಟು ಇಂಬು ನೀಡುವಂತಾಗಬಹುದು. ಪೊಲೀಸ್ ಹಾಗೂ ನ್ಯಾಯವ್ಯವಸ್ಥೆ ಮೇಲೆ ಜನರ ವಿಶ್ವಾಸ ಎಂದಿಗೂ ಕುಂದಬಾರದು. ಉಗ್ರ ಸಿದ್ಧಾಂತಗಳಿಗೆ ಆಕರ್ಷಿತರಾಗದಂತೆ ಯುವಜನರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ನಾಯಕರ ನೆರವು ಪಡೆದುಕೊಳ್ಳುವ ಅಗತ್ಯವನ್ನೂ ಇಲ್ಲಿ ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT