ಕದಿರೇನಹಳ್ಳಿ ಬೇಂದ್ರೆನಗರದ ಕನಕ ಲೇಔಟ್ನ ಖಾಲಿ ಸೈಟ್ಗಳು ಈಗ ತ್ಯಾಜ್ಯ ವಸ್ತುಗಳನ್ನು ಸುರಿಯುವ ಸ್ಥಳವಾಗಿ ಮಾರ್ಪಾಡಾಗಿವೆ. ಇದರಿಂದ ಸುತ್ತಮುತ್ತ ಪ್ರದೇಶದ ಜನರಲ್ಲಿ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.
ಬಯಲು ಶೌಚ ಇಲ್ಲಿ ಸಾಮಾನ್ಯ. ಹೀಗಾಗಿ ಎಲ್ಲೆಲ್ಲೂ ಗಬ್ಬುನಾತ. ವಿಪರೀತ ಸೊಳ್ಳೆಗಳ ಕಾಟದಿಂದಲೂ ಈ ಪ್ರದೇಶದ ಜನರು ಹೈರಾಣಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.
ಬೇಂದ್ರೆನಗರದ ಕನಕ ಲೇಔಟ್ನ ನಿವಾಸಿಗಳು
ನೀರಿನ ಮೀಟರ್ ಸರಿಪಡಿಸಿ
ಬನ್ನೇರುಘಟ್ಟ ರಸ್ತೆಯ ಹುಳಿಮಾವು ಸುತ್ತಮುತ್ತ ನೀರಿನ ಮೀಟರ್ ಏರುಪೇರಾಗಿದೆ. ವಿಪರೀತ ಬಿಲ್ ಬರುತ್ತಿದೆ. ಮನೆಯಲ್ಲಿ ಇಬ್ಬರು ಹಿರಿಯ ನಾಗರಿಕರಷ್ಟೇ ವಾಸವಿರುವುದು. ಆದರೆ ಬಿಲ್ ಮಾತ್ರ ₹271 ಬಂದಿದೆ. ಇದು ನನ್ನೊಬ್ಬನ ಸಮಸ್ಯೆ ಇಲ್ಲ. ಬಡಾವಣೆಯ ಅನೇಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಬೇಕು.
ಬಿ.ಜಿ.ಸತ್ಯಮೂರ್ತಿ, ಹುಳಿಮಾವು
ರಾಜಕಾಲುವೆಯಲ್ಲಿ ಕಸ ತೆಗೆಯಿರಿ
ಕೃಷ್ಣರಾಜಪುರದ ಬಸವನಪುರದಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ರಾಜಕಾಲುವೆಯಲ್ಲಿ ಕಸ ಹಾಗೂ ತ್ಯಾಜ್ಯವಸ್ತುಗಳನ್ನು ಸುರಿಯಲಾಗಿದೆ. ನಾಯಿಗಳು ಆಹಾರದ ಆಸೆಯಿಂದ ಅವುಗಳನ್ನು ಕೆದಕಿ, ಸುತ್ತಲ ವಾತಾವರಣ ಹಾಳಾಗಿದೆ.
ಇನ್ನು ರಾಜಕಾಲುವೆಯಲ್ಲಿ ಕಸ ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರ ಪರಿಹರಿಸಬೇಕು.
ಪ್ರವೀಣ್ ಕುಮಾರ್, ಬಸವನಪುರ