ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿಗೆ ಪರಮಾಧಿಕಾರ ಕೊಟ್ಟಿದ್ದು ಯಾರು

Last Updated 2 ಜೂನ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು:  ಭಾರತ ತಂಡದ ಮುಖ್ಯ ಕೋಚ್ ಮತ್ತು ವೀಕ್ಷಕ ವಿವರಣೆಕಾರರ ನೇಮಕದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರವನ್ನು ವಿರಾಟ್ ಕೊಹ್ಲಿ ಅವರಿಗೆ ಕೊಟ್ಟಿದ್ದು ಯಾರು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನೇಮಕ ಮಾಡಿ ರುವ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ರಾಜೀನಾಮೆ ನೀಡಿರುವ ಅವರು ಮುಖ್ಯಸ್ಥ ವಿನೋದ್ ರಾಯ್ ಅವರಿಗೆ ಬರೆದಿರುವ ಪತ್ರದಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದಾರೆ.

‘ಜನಪ್ರಿಯ ಆಟಗಾರ ಅಥವಾ ಮಾಜಿ ಆಟಗಾರರು ಪ್ರಮುಖ ನಿರ್ಧಾರ ಗಳಲ್ಲಿ ಹಸ್ತಕ್ಷೇಪ ಮಾಡು ತ್ತಿದ್ದಾರೆ. ಇದರಿಂದಾಗಿ   ನಿಯಮಗಳ ಉಲ್ಲಂಘನೆ ಅವ್ಯಾಹತವಾಗಿ ನಡೆಯುತ್ತಿದೆ.

‘ಈ ಹಿಂದೆ  ಹರ್ಷ ಭೋಗ್ಲೆ (ವಿರಾಟ್ ಕೊಹ್ಲಿ ಅವರ ಆಟವನ್ನು ಟೀಕಿಸಿದ್ದರು)ಅವರನ್ನು ವೀಕ್ಷಕ ವಿವರಣೆಕಾರ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇವತ್ತು ಕೋಚ್    ಮತ್ತು ವಿವರಣೆಕಾರರ ನೇಮಕದಲ್ಲಿ  ನಿರ್ಧಾರ ತೆಗೆದುಕೊಳ್ಳುತ್ತಿರುವ ಆಟಗಾರರು ಮುಂದಿನ ದಿನಗಳಲ್ಲಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳ ನೇಮಕದಲ್ಲಿಯೂ ಮೂಗು ತೂರಿಸ ಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ದೋನಿಗೆ ಏಕೆ ‘ಎ’ ದರ್ಜೆ?
‘ಮಹೇಂದ್ರಸಿಂಗ್ ದೋನಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿ ಎರಡು ವರ್ಷಗಳೇ ಕಳೆದಿವೆ.  ಅವರು ಕೇವಲ ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಆದರೂ ಅವರಿಗೆ ‘ಎ’ ದರ್ಜೆ ಆಟಗಾರರ ಗುತ್ತಿಗೆ ನೀಡಿರುವುದು ಏಕೆ? ಅವರ ತಾರಾಮೌಲ್ಯವನ್ನು ನೋಡಿ ಇದನ್ನು ನೀಡಿರುವುದು ಸೂಕ್ತವಲ್ಲ’ ಎಂದಿದ್ದಾರೆ. ‘ದೋನಿ ಭಾರತ ತಂಡದ ನಾಯಕತ್ವ ವಹಿಸಿದ್ದ ಸಂದರ್ಭದಲ್ಲಿ ರಿತಿ ಸ್ಪೋರ್ಟ್ಸ್‌ ಕಂಪೆನಿಯಲ್ಲಿ ಪಾಲುದಾರರಾಗಿದ್ದರು. ಆ ಕಂಪೆನಿಯು ಸುರೇಶ್ ರೈನಾ, ಕರ್ಣ ಶರ್ಮಾ, ಆರ್‌.ಪಿ. ಸಿಂಗ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇಂತಹ ನಿಯಮ ಬಾಹಿರ ಚಟುವಟಿಕೆಗಳು ನಿಲ್ಲಲು ಸಿಒಎ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. 

ಗಂಗೂಲಿ ವಿರುದ್ಧ ಕಿಡಿ
‘ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿಯೂ ಹಿತಾಸಕ್ತಿ ಸಂಘರ್ಷ ನಿಯಮವನ್ನು ಗಾಳಿಗೆ ತೂರಲಾಗಿದೆ. ರಾಜ್ಯ ಸಂಸ್ಥೆ ಯೊಂದರ ಅಧ್ಯಕ್ಷರೂ ಆಗಿರುವ ಮಾಜಿ ಕ್ರಿಕೆಟಿಗರೊಬ್ಬರು ಮಾಧ್ಯಮ ಸಂಸ್ಥೆಗ ಳೊಂದಿಗೆ ಒಪ್ಪಂದ ಮಾಡಿ ಕೊಂಡಿ ದ್ದಾರೆ.  ವೀಕ್ಷಕ ವಿವರಣೆ ನೀಡು ತ್ತಿದ್ದಾರೆ’ ಎಂದು ಸೌರವ್ ಗಂಗೂಲಿ ವಿರುದ್ಧ ಗುಹಾ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

ದ್ರಾವಿಡ್, ಶ್ರೀಧರ್ ತಪ್ಪಿತಸ್ಥರು
ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಗುಹಾ ಪರೋಕ್ಷವಾಗಿ ಟೀಕಿಸಿದ್ದಾರೆ. ‘ರಾಹುಲ್ ದ್ರಾವಿಡ್ ಮತ್ತು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರು ಐಪಿಎಲ್‌ನ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಗಳಿಗೂ ಕೋಚ್ ಆಗಿದ್ದಾರೆ. ಹಿತಾಸಕ್ತಿ ಸಂಘರ್ಷ ನಿಯಮದಲ್ಲಿ ಇರುವ ಲೋಪವನ್ನು ಬಳಸಿಕೊಂಡು ಅವರು ಈ ರೀತಿಯ ಉಪಯೋಗಗಳನ್ನು ಪಡೆಯುತ್ತಿದ್ದಾರೆ’  ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಬಿಸಿಸಿಐ ರಾಷ್ಟ್ರೀಯ ತಂಡಗಳ  ಕೋಚ್‌ಗಳಿಗೆ ವರ್ಷದಲ್ಲಿ ಕೇವಲ ಹತ್ತು ತಿಂಗಳ ಗುತ್ತಿಗೆ ನೀಡುತ್ತಿದೆ. ಇದ ರಿಂದಾಗಿ  ಇನ್ನುಳಿದ ಎರಡು ತಿಂಗಳಲ್ಲಿ ಅವರಿಗೆ ಐಪಿಎಲ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಕೊಡುತ್ತಿದೆ. ಇದು ನಿಯಮ ಉಲ್ಲಂಘನೆಗೆ ಕಾರಣ ವಾಗುತ್ತಿದೆ. ಹಿತಾಸಕ್ತಿ ಸಂಘರ್ಷ ನಿಯಮವನ್ನು ಕಟ್ಟುನಿಟ್ಟಿನ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಕೋಚ್ ನೇಮಕ ಈಗಲೇ ಬೇಕಿತ್ತೆ?
ಭಾರತ ತಂಡದ ಮುಖ್ಯ ಕೋಚ್ ನೇಮಕವನ್ನು ಏಪ್ರಿಲ್ ತಿಂಗಳಲ್ಲಿಯೇ ಮಾಡಿ ಮುಗಿಸಬೇಕಿತ್ತು.  ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ನಡೆಯುವ ಸಂದರ್ಭ ದಲ್ಲಿ ಆ ಕಾರ್ಯವನ್ನು ಕೈಗೆತ್ತಿಕೊಂಡಿ ರುವುದು ತಂಡದ ಆಟಗಾರರು,  ನಾಯಕ ಮತ್ತು ಕೋಚ್‌ಗಳನ್ನು ಅಧೀರ ಗೊಳಿಸಿದಂತಾ ಗಿದೆ ಎಂದು ಬಿಸಿಸಿಐ ಕ್ರಮವನ್ನು ಗುಹಾ ಟೀಕಿಸಿದ್ದಾರೆ.
‘ಕುಂಬ್ಳೆ ಮತ್ತು ಕೊಹ್ಲಿ ನಡುವಿನ ವಿವಾದವನ್ನು ಬಗೆಹರಿಸುವಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಪದಾಧಿಕಾರಿ ಅಮಿತಾಭ್ ಚೌಧರಿ ಅವರು ವೃತ್ತಿಪರತೆಯಿಂದ ನಡೆದು ಕೊಂಡಿಲ್ಲ. ಅದರಿಂದಾಗಿ ಗೊಂದಲ ಸೃಷ್ಟಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ವಿಷಯದಲ್ಲಿ ಸಿಒಎ ಕೂಡ ಮೌನ ವಹಿಸಿದೆ. ತನ್ನ ಅಧಿಕಾರವನ್ನು ಬಳಸಿ ನಿಯಮ ಜಾರಿ ಮಾಡಬೇಕಿತ್ತು’ ಎಂದು ಗುಹಾ ಅಭಿಪ್ರಾಯಪಟ್ಟಿದ್ದಾರೆ.

ನನಗೇನೂ ಗೊತ್ತಿಲ್ಲ: ಶ್ರೀನಾಥ್

ಚಂಡಿಗಡ (ಪಿಟಿಐ): ರಾಮ ಚಂದ್ರ ಗುಹಾ ಅವರ ಪತ್ರದ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಕುರಿತು ಈಗಲೇ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದು ಐಸಿಸಿ ರೆಫರಿ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.
ಇಲ್ಲಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಒಎಗೆ ತಮ್ಮ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಶ್ರೀನಾಥ್ ಅವರನ್ನು ನೇಮಿಸಬೇಕೆಂದು ಗುಹಾ ಸಲಹೆ ನೀಡಿದ್ದರು.
ಈ ಕುರಿತು ಕ್ರಿಕೆಟಿಗ ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ.
‘ಅನಿಲ್ ಮತ್ತು ವಿರಾಟ್ ನಡುವಿನ  ವಿವಾದದ ಕುರಿತು ಕೂಡ ಪ್ರತಿಕ್ರಿಯಿಸುವುದಿಲ್ಲ, ಅದಕ್ಕೆ ಇದು ಸೂಕ್ತ ಕಾಲವಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT