ದೇವನಹಳ್ಳಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇದೇ 9 ರಂದು ದೇವನಹಳ್ಳಿ ಮತ್ತು ವಿಜಯಪುರಕ್ಕೆ ಬರಲಿದ್ದು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗೇಶ್ ತಿಳಿಸಿದರು.
ತಾಲ್ಲೂಕಿನ ಕೊಯಿರಾ ಗ್ರಾಮದ ರಮೇಶ್ ಬಾಬು ಅವರ ಮನೆಯಂಗಳದಲ್ಲಿ ಮಂಗಳವಾರ ನಡೆದ ಬಿಜೆಪಿ ಅವತಿ ಶಕ್ತಿ ಕೇಂದ್ರದ ಪ್ರಮುಖ ಮುಖಂಡರ ಸಭೆ ಮತ್ತು ಪದಾಧಿಕಾರಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ ರವಿಕುಮಾರ್ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷಿಸದೆ ಒಗ್ಗಟ್ಟು ಕಾಯ್ದುಕೊಂಡರೆ ಮಾತ್ರ ಅಭ್ಯರ್ಥಿ ಗೆಲುವು ಸಾಧ್ಯವಾಗಲಿದೆ. ತಾಲ್ಲೂಕಿನಲ್ಲಿ ಅಧ್ಯಕ್ಷರು ಒಂದು ವರ್ಷದಿಂದ ಕಾರ್ಯಕರ್ತರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಹಿತಾಸಕ್ತಿಯಿಂದ ಬೂತ್ ಮಟ್ಟದಲ್ಲಿ ಮತದಾರರನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡದಿದ್ದರೆ ಪ್ರಾಯಶ್ಚಿತ ತಪ್ಪಿದ್ದಲ್ಲ, ಫಲಿತಾಂಶದ ನಂತರ ಆತ್ಮಾವಲೋಕನಕ್ಕೆ ನೈತಿಕತೆ ಇರುವುದಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ತಮ್ಮಯ್ಯ ಮಾತನಾಡಿ, ‘ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಂತರ ಯಾವುದೇ ಕಾರ್ಯಕರ್ತರ ಸಭೆ ನಡೆದಿಲ್ಲವೆಂದರೆ ಹೇಗೆ, ವೈಯಕ್ತಿಕ ಕೆಲಸ ಬಿಟ್ಟು ಪಕ್ಷಕ್ಕೆ ಶ್ರಮಿಸಬೇಕು’ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎನ್ ರಮೇಶ್ಬಾಬು ಮಾತನಾಡಿ, ಬಿಜೆಪಿ ಪಕ್ಷದಲ್ಲಿ ವಿವಿಧ ಘಟಕಗಳಿಗೆ ಅತಿಹೆಚ್ಚು ಪದಾಧಿಕಾರಿಗಳಿದ್ದಾರೆ. ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಉತ್ತಮ ಅವಕಾಶವಿದೆ ಎಂರು.
ಯಡಿಯೂರಪ್ಪ ಅವರು ದೇವನಹಳ್ಳಿಯ ನಂತರ ಹೊಸ ಕೋಟೆಯಲ್ಲಿ ನಡೆಯಲಿರುವ ಕಾರ್ಯ ಕ್ರಮದಲ್ಲಿ ಭಾಗವಹಿಸುವರು ಎಂದರು. ನಾಲ್ಕು ತಾಲ್ಲೂಕುಗಳ ಪಕ್ಷದ ಪದಾಧಿಕಾರಿಗಳ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಅಯ್ಕೆಗೊಂಡ ಸದಸ್ಯರೊಂದಿಗೆ ಪ್ರತ್ಯೇಕ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್, ತಾಲ್ಲೂಕು ಉಪಾಧ್ಯಕ್ಷರಾದ ಕೆ.ಸಿ ಮುನಿರಾಜು, ಸಾವಕನಹಳ್ಳಿ ನಾಗೇಶ್, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಹರ್ಷವರ್ಧನ್, ಅವತಿ ಶಕ್ತಿ ಕೇಂದ್ರ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗೌಡ, ತಾಲ್ಲೂಕು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಆಂಜಿನಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.