ಬೆಂಗಳೂರು: ‘ಕಲಾಕೃತಿಗಳ ರಚನೆಗೆ ಆರ್ಟ್ ಸ್ಟುಡಿಯೊ ಸ್ಥಾಪಿಸಲು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಬುಧವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಂದು–ಇಂದು–ಮುಂದು’ ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ದೆಹಲಿಯಲ್ಲಿನ ಆರ್ಟ್ ಸ್ಟುಡಿಯೊವೊಂದನ್ನು ನೋಡಿ ಬಂದ ಅಧಿಕಾರಿಯೊಬ್ಬರು, ನಗರದಲ್ಲೂ ಅದೇ ರೀತಿ 100 ಸ್ಟುಡಿಯೊ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಒಂದೂ ಆಗಿಲ್ಲ. ಕಲಾವಿದರು ವಿಷಯ ವಿನಿಮಯ ಮಾಡಿಕೊಳ್ಳಲು ಆರ್ಟ್ ಸ್ಟುಡಿಯೊ ಅಗತ್ಯ’ ಎಂದು ಒತ್ತಾಯಿಸಿದರು.
‘ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಗ್ರಾಫಿಕ್ಸ್ ಸ್ಟುಡಿಯೊ ಪ್ರಾರಂಭವಾಗಿದ್ದು, ಮೊದಲ ಶಿಬಿರ ಆಯೋಜನೆ ಆಗುತ್ತಿರುವುದು ಸಂತಸ’ ಎಂದು ಹೇಳಿದರು.
1995ರಲ್ಲಿ ಅಕಾಡೆಮಿ ಅಧ್ಯಕ್ಷರಾಗಿದ್ದ ಸಿ. ಚಂದ್ರಶೇಖರ್, ‘ನನ್ನ ಕಾಲಾವಧಿಯಲ್ಲಿ ಚಿತ್ರಯಾತ್ರೆ ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸಿದ್ದೆ. ಈಗ ಅದು ಕಲಾಸಂಚಾರ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಜನರಲ್ಲಿ ಕಲೆಯನ್ನು ನೋಡುವ ಅಭಿರುಚಿ ಬೆಳೆಸಬೇಕಾಗಿರುವುದು ನಮ್ಮದೇ ಕರ್ತವ್ಯ ಎನ್ನುವ ಉದ್ದೇಶದಿಂದ ಅದನ್ನು ಆರಂಭಿಸಿದ್ದೆ’ ಎಂದು ಸ್ಮರಿಸಿಕೊಂಡರು.
‘ಕೈಯಲ್ಲಿ ಚಿತ್ರಬಿಡಿಸುವ ಪ್ರವೃತ್ತಿಯೇ ಮರೆಯುತ್ತಿದೆ. ಎಲ್ಲವೂ ಯಾಂತ್ರೀಕರಣಗೊಳ್ಳುತ್ತಿದೆ. ಇದರಿಂದ ಕಲೆಯ ಗುಣಮಟ್ಟ ಕಡಿಮೆಯಾಗುವುದಿಲ್ಲವೇ’ ಎಂದು ಸಂವಾದದಲ್ಲಿ ಮಹಿಳೆಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿ. ಚಂದ್ರಶೇಖರ್, ‘ಹೌದು, ಕಂಪ್ಯೂಟರ್ ಟೂಲ್ಗಳಂತೆ ಆಗಿದ್ದೇವೆ’ ಎಂದರು.