ತರೀಕೆರೆ: ತಾಲ್ಲೂಕಿನಲ್ಲಿ ಉರ್ದು ಪ್ರೌಢ ಶಾಲೆಗಳು ಇಲ್ಲದೇ ಇರುವುದರಿಂದ ಪ್ರಾಥಮಿಕ ಶಾಲೆಗಳು ಮುಚ್ಚುವ ಭೀತಿ ಯಲ್ಲಿವೆ. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಪ್ರೌಢಶಾಲೆಗಳು ಇಲ್ಲ ಎಂಬುದು ಪೋಷಕರಿಗೆ ಚಿಂತೆಯಾಗಿದೆ. ಇದಲ್ಲದೇ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತೊಂದು ಸಮಸ್ಯೆ.
ಖಾಸಗಿ ಶಾಲೆಗಳ ಆಕರ್ಷಣೆ, ಆರ್.ಟಿ.ಇಯಿಂದಾಗಿ ಮಧ್ಯಮ ಹಾಗೂ ಶ್ರೀಮಂತ ವರ್ಗದವರು ಇಂಗ್ಲಿಷ್ ಕಾನ್ವೆಂಟ್ಗಳಿಗೆ ಮಕ್ಕಳನ್ನು ಸೇರಿಸುತ್ತಿ ದ್ದಾರೆ. ಆದರೆ ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಆಧಾರ.
ಪ್ರಾಥಮಿಕ ಶಿಕ್ಷಣವನ್ನು ಉರ್ದು ಭಾಷೆಯಲ್ಲಿ ಪೂರೈಸಿದ ನಂತರ ಪ್ರೌಢಶಾಲೆಗೆ ಎಲ್ಲಿ ಸೇರಿಸುವುದು ಎಂಬ ಚಿಂತೆ ಪೋಷಕರದ್ದು, ಇದರಿಂದಾಗಿ ಮಕ್ಕಳನ್ನು ಉರ್ದು ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂ ಕಿನಲ್ಲಿ 8 ಉರ್ದು ಹಿರಿಯ ಪ್ರಾಥಮಿಕ ಶಾಲೆ, 16 ಕಿರಿಯ ಪ್ರಾಥಮಿಕ ಹಾಗೂ ಒಂದು ಪ್ರೌಢಶಾಲೆ ಇದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 871 ವಿದ್ಯಾರ್ಥಿಗಳು ದಾಖಲಾಗಿದ್ದರು.
ಉರ್ದು ಶಾಲೆಗಳಲ್ಲಿ 8 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು , ವಿಷಯಾ ಧಾರಿತ ಶಿಕ್ಷಕರು ಹಾಗೂ ತರಗತಿಗೊಬ್ಬ ಶಿಕ್ಷಕ ಎಂಬ ನಿಯಮದಂತೆ ಇನ್ನು 10 ಶಿಕ್ಷಕರೂ ಬೇಕು. ಲೀನ್ಶಿಪ್ಟ್ನಲ್ಲಿ ನಿಯೋಜನೆಯಾಗಿದ್ದ 8 ಮಂದಿ ಶಿಕ್ಷಕರು ತಾಲ್ಲೂಕಿಗೆ ಬರಲೇ ಇಲ್ಲ.
ಪಟ್ಟಣದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಉರ್ದು ಬಾಲಕರ ಶಾಲೆಗೆ ಈವರೆಗೆ ಸ್ವಂತ ಕಟ್ಟಡವೂ ಇಲ್ಲ. ಅಲ್ಲದೇ ಶೌಚಾಲಯ, ದಾಸೋಹ ಕೊಠಡಿ ಇಲ್ಲ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಶತಮಾನೋತ್ಸವದ ಅಂಚಿನಲ್ಲಿರುವ ಎಂ.ಜಿ.ರಸ್ತೆಯ ಬಾಲಕಿಯರ ಶಾಲೆಯಲ್ಲಿ ಮಕ್ಕಳಿಲ್ಲದೇ ಕೊಠಡಿಗಳು ಭಣಗುಡುತ್ತಿದ್ದು ಶಾಲೆ ಮುಚ್ಚುವ ಸ್ಥಿತಿಯಲ್ಲಿದೆ.
ಗುಂಡೇನಹಳ್ಳಿಯ ಸರ್ಕಾರಿ ಉರ್ದು ಶಾಲೆ ಈಗಾಗಲೇ ಮುಚ್ಚಿ ಹೋಗಿದ್ದು, ಶಿಥಿಲಗೊಂಡಿರುವ ಕರಕುಚ್ಚಿಯಲ್ಲಿನ ಉರ್ದು ಶಾಲೆಗೆ ಉರ್ದು ಶಿಕ್ಷಕರಿಲ್ಲದೆ ಕನ್ನಡ ಶಿಕ್ಷಕರು ಪಾಠ ಮಾಡುವಂತಾಗಿದೆ. ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಕೋಡಿ ಕ್ಯಾಂಪ್ ಶಾಲೆ , ಗೌರಾಪುರ, ಅಜ್ಜಂಪುರ, ಬಿಲ್ಲಹಳ್ಳಿಗಳಲ್ಲಿ ವಿದ್ಯಾರ್ಥಿ ಗಳು ಹೆಚ್ಚಿದ್ದರೂ ಆ ಪ್ರಮಾಣಕ್ಕೆ ತಕ್ಕಂತೆ ಶಿಕ್ಷಕರು ಇಲ್ಲ.
‘ಉರ್ದು ಶಾಲೆಗಳಲ್ಲಿ ಮಾತೃಭಾಷೆಯ ಶಿಕ್ಷಣದ ಜತೆಗೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಒತ್ತು ನೀಡಿದ್ದು, ಸರ್ಕಾರ ಉರ್ದು ಶಿಕ್ಷಕರ ನೇಮಕ ಮಾಡಬೇಕು ಹಾಗೂ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂಬುದು ಉರ್ದು ಸಿಆರ್ಪಿ ಹಸೀಬಾ ಅವರ ಆಗ್ರಹ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.