ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ಫೇಸ್ಬುಕ್ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಸಂಸ್ಥೆಯ ಆಡಳಿತಾಧಿಕಾರಿ ಕಗ್ಗಲೀಪುರ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ..
‘ಗುರೂಜಿ ಅವರನ್ನು ಗುಂಡಿಟ್ಟು ಹತ್ಯೆ ಮಾಡುತ್ತೇವೆ’ ಎಂದು ಮೈಸೂರಿನ ಸ್ನಾತಕೋತ್ತರ ಪದವೀಧರ ಎಚ್.ರವೀಂದ್ರ ಎಂಬುವರು ಫೇಸ್ಬುಕ್ ಖಾತೆ
ಯಲ್ಲಿ ಬರೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಕೊಲೆ ಬೆದರಿಕೆ ಸಂದೇಶವನ್ನು ಆರೋಪಿಯು ಖಾತೆಯಿಂದ ಅಳಿಸಿ ಹಾಕಿದ್ದಾನೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಕನಕಪುರ ರಸ್ತೆಯ ಹಾರೋಹಳ್ಳಿಯಲ್ಲಿ ನೆಲೆಸಿರುವ ಮಾಹಿತಿ ಇದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.