ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ– ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿರುವ ಎರಡನೇ ಸೆಮಿಫೈನಲ್ ಪಂದ್ಯ ಸಮೀಪಿಸುತ್ತಿದ್ದಂತೆ ಬಾಂಗ್ಲಾದೇಶ ತಂಡದ ಅಭಿಮಾನಿಗಳು ಭಾರತದ ರಾಷ್ಟ್ರ ಧ್ವಜವನ್ನು ಅವಮಾನಿಸಿದ್ದಾರೆ.
ಭಾರತದ ರಾಷ್ಟ್ರ ಧ್ವಜವನ್ನು ನಾಯಿಯ ದೇಹಕ್ಕೆ ಹೊದಿಸಿದ್ದು ಬಾಂಗ್ಲಾದೇಶದ ಧ್ವಜವನ್ನು ಹುಲಿಯ ದೇಹದ ಮೇಲೆ ಹೊದಿಸಲಾಗಿದೆ. ಚಿತ್ರದಲ್ಲಿ ನಾಯಿಯನ್ನು ಹುಲಿ ಬೆನ್ನಟ್ಟಿ ಹೋಗುತ್ತಿದ್ದು, ಈ ಚಿತ್ರವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆಯೂ ಕೂಡ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಬಾಂಗ್ಲಾ ಬೌಲರ್ ತಾಸ್ಕಿನ್ ಅಹ್ಮದ್ ‘ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ದೋನಿ ಅವರ ರುಂಡವನ್ನು ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದರು.
ಬಾಂಗ್ಲಾ ಮೂಲದ ಸ್ಥಳೀಯ ಸುದ್ದಿ ಪತ್ರಿಕೆಯೊಂದು ಟೀಂ ಇಂಡಿಯಾ ಆಟಗಾರರ ಅರ್ಧ ತಲೆ ಬೋಳಿಸಿದ ಚಿತ್ರವನ್ನು ಪ್ರಕಟಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುರುವಾರ ನಡೆಯುವ ಚಾಂಪಿಯನ್ಸ್ ಟ್ರೋಫಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ.