ಬೆಂಗಳೂರು: ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಭವಿಷ್ಯ ಗುರುವಾರ ತೀರ್ಮಾನವಾಗಲಿದೆ.
ಶಂಕರಮೂರ್ತಿ ಅವರನ್ನು ಬೆಂಬಲಿಸುವ ಸಂಬಂಧ ಮಂಗಳವಾರ ಜೆಡಿಎಸ್ ಗೊಂದಲದಲ್ಲಿತ್ತು. ಆದರೆ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ಶಂಕರಮೂರ್ತಿ ಅವರನ್ನು ಬೆಂಬಲಿಸಲು ನಮ್ಮ ಪಕ್ಷ ತೀರ್ಮಾನಿಸಿದೆ’ ಎಂದು ತಿಳಿಸಿದರು.
ಇದರಿಂದ ಸಭಾಪತಿ ಪದಚ್ಯುತಿಗೊಳಿಸುವ ಕಾಂಗ್ರೆಸ್ ಪ್ರಯತ್ನ ಕುತೂಹಲದ ಹಂತ ತಲುಪಿದೆ.
ವಿಧಾನಪರಿಷತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಒಟ್ಟು ಸಂಖ್ಯೆ 36 ಆಗಲಿದೆ. ಕಾಂಗ್ರೆಸ್ 33 ಸ್ಥಾನಗಳನ್ನು ಹೊಂದಿದೆ. ಪಕ್ಷೇತರರ ಸಂಖ್ಯೆ 5.
ವಿಮಲಾಗೌಡ ನಿಧನದಿಂದ ಒಂದು ಸ್ಥಾನ ಖಾಲಿ ಇದೆ. ಪಕ್ಷೇತರರ ಬೆಂಬಲ ಪಡೆಯುವ ಕಸರತ್ತು ನಡೆಸಿದೆ. ಜೆಡಿಎಸ್ ಬಂಡಾಯ ಸದಸ್ಯ ಪುಟ್ಟಣ್ಣ ಅವರಿಗೂ ಗಾಳ ಹಾಕಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಜೆಡಿಎಸ್ ಜತೆಗೆ, ಪಕ್ಷೇತರರಾದ ಬಸನಗೌಡ ಪಾಟೀಲ ಯತ್ನಾಳ್, ಮಲ್ಲಿಕಾರ್ಜುನ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರ ಬೆಂಬಲ ಸಿಗುವ ನಿರೀಕ್ಷೆ ಇದೆ’ ಎಂದರು.
‘ಅವಿಶ್ವಾಸ ನಿರ್ಣಯದ ಪರವಾಗಿ ಪಕ್ಷೇತರರಲ್ಲಿ ಬೈರತಿ ಸುರೇಶ್, ವಿವೇಕ ರಾವ್ ಪಾಟೀಲ ಮತ ಚಲಾಯಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಅವಿಶ್ವಾಸ ನಿರ್ಣಯ ಮತಕ್ಕೆ ಹಾಕುವ ಸಂದರ್ಭದಲ್ಲಿ ಎಲ್ಲ 13 ಸದಸ್ಯರೂ ಹಾಜರಿರಬೇಕು ಎಂದು ಜೆಡಿಎಸ್ ವಿಪ್ ಜಾರಿ ಮಾಡಿದೆ.