ಬೆಂಗಳೂರು: ‘ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಅನಗತ್ಯ ಖರ್ಚಿಗೆ ದಾರಿ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ವಿಧಾನಪರಿಷತ್ತಿನಲ್ಲಿ ಶುಕ್ರವಾರ ಬಿಜೆಪಿಯ ಹನುಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿ, ‘ಇಂತಹ ವಿಶ್ವವಿದ್ಯಾಲಯ ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಅನುಕೂಲ ಆಗುತ್ತದೆ’ ಎಂದು ಪ್ರಶ್ನಿಸಿದರು.
‘ಉನ್ನತ ಶಿಕ್ಷಣ ಪರಿಷತ್ತು ಈ ಬಗ್ಗೆ ಅಧ್ಯಯನ ನಡೆಸಿದೆ. ಇಂತಹ ವಿಶ್ವವಿದ್ಯಾಲಯಗಳ ಸ್ಥಾಪನೆಯ ಅಗತ್ಯವಿಲ್ಲ ಎಂದೂ ಹೇಳಿದೆ. ಇದು ದುಂದು ವೆಚ್ಚಕ್ಕೆ ದಾರಿ ಮಾಡುತ್ತದೆ. ಜನಪದ ವಿ.ವಿ ಅಥವಾ ಹಂಪಿ ಕನ್ನಡ ವಿ.ವಿಯೊಂದಿಗೆ ವೀಲೀನಗೊಳಿಸುವುದು ಸೂಕ್ತ ಎಂದು ಪರಿಷತ್ತು ವರದಿ ನೀಡಿದೆ. ವರದಿಯನ್ನು ಒಪ್ಪಿ, ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೆ. ಆದರೂ ಸ್ಥಾಪನೆ ಆದೇಶ ಹೊರಡಿಸಲಾಯಿತು’ ಎಂದರು.
‘ಈ ವಿಶ್ವವಿದ್ಯಾಲಯದ ಸ್ಥಾಪನೆಗೆ ಇನ್ನೂ ಹಣಕಾಸು ಒದಗಿಸಿಲ್ಲ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ವಿಶ್ವವಿದ್ಯಾಲಯಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಬೆಳಗಾವಿ ತಾಂತ್ರಿಕ ವಿವಿಗೆ ಈಗ ₹ 81 ಕೋಟಿ ಕೊಟ್ಟಿದ್ದೇವೆ. ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ₹ 100 ಕೋಟಿ ಬೇಕಾಗುತ್ತದೆ. ಹಣಕಾಸಿನ ಮುಗ್ಗಟ್ಟು ಇದೆ’ ಎಂದು ರಾಯರಡ್ಡಿ ಹೇಳಿದರು.