ಕಲಬುರ್ಗಿ: ಚಿತ್ತಾಪುರ ತಾಲ್ಲೂಕು ಕಾಳಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ.
ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಆರಂಭವಾದ ಸ್ವಲ್ಪ ಹೊತ್ತಿನಲ್ಲಿ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಬ್ಲಾಕ್ ನಂ.10ರ ಕಿಟಕಿ ಬಳಿ ಬಂದ ಯುವಕನೊಬ್ಬ, ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಿಂದ ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು ಮೊಬೈಲ್ನಲ್ಲಿ ಫೋಟೊ ತೆಗೆದಿದ್ದಾನೆ. ಬಳಿಕ ಅದನ್ನು ವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟಿದ್ದಾನೆ.
ನಂತರ ಮತ್ತೆ ಇಬ್ಬರು ಯುವಕರು ಪ್ರಶ್ನೆ ಪತ್ರಿಕೆಯ ಫೋಟೊ ತೆಗೆಯಲು ಮುಂದಾದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಶ್ನೆಪತ್ರಿಕೆಯ ಫೋಟೊ ತೆಗೆಯಲು ನೆರವಾದ ರೇವಗ್ಗಿ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ಪುನರಾವರ್ತಿತ ಅಭ್ಯರ್ಥಿಗಳಿಂದ ಲಿಖಿತ ಹೇಳಿಕೆ ಪಡೆದು, ಅವರನ್ನು ಡಿಬಾರ್ ಮಾಡಿದರು.
‘ಪ್ರಶ್ನೆ ಪತ್ರಿಕೆಯ ಫೋಟೊ ತೆಗೆದಿರುವ ಕಾಳನೂರು ತಾಂಡಾದ ಶ್ರವಣಕುಮಾರ ಚಿನ್ನಾ ರಾಠೋಡ ವಿರುದ್ಧ ಕಾಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದು, ಅವರು ಮುಂದಿನ ಕ್ರಮ ಜರುಗಿಸಲಿದ್ದಾರೆ’ ಎಂದು ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದರು.