ಬೆಂಗಳೂರು: ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ‘ಕೆ.ಎಸ್.ನ. ಪ್ರಶಸ್ತಿ’ ಹಾಗೂ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರಿಗೆ ‘ಕೆ.ಎಸ್.ನ. ಕಾವ್ಯಗಾಯನ ಪ್ರಶಸ್ತಿ’ಯನ್ನು ನಗರದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.
‘ಕೆ.ಎಸ್.ನರಸಿಂಹಸ್ವಾಮಿ ಅವರು ಕೊನೆಗಾಲದಲ್ಲಿ ಕಣ್ಣು ಕುರುಡಾಗಿ ಬಹಳ ಕಷ್ಟಪಟ್ಟರು. ಆದರೆ, ಕವಿತೆ ಬರೆಯುವ ಅವರ ಹಂಬಲ ಮಾತ್ರ ನಿಲ್ಲಲಿಲ್ಲ. ವೆಂಕಟೇಶಮೂರ್ತಿ ಅವರ ಸಹಾಯದಿಂದ ಕವಿತೆಗಳನ್ನು ಬರೆಸಿದರು. ಅವೆಲ್ಲ ಅಭೂತಪೂರ್ವ ಕ್ಷಣಗಳು’ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ನೆನೆದರು.
‘ಬಡತನದಿಂದಾಗಿ ನರಸಿಂಹಸ್ವಾಮಿ ಅವರು ‘ಮೈಸೂರು ಮಲ್ಲಿಗೆ’ಯ ಕೃತಿಸ್ವಾಮ್ಯವನ್ನು ಮಾರಿದ್ದರು. ಹೀಗಾಗಿ, 10 ವರ್ಷಕ್ಕೂ ಹೆಚ್ಚು ಬೇರೆ ಪುಸ್ತಕ ಸಂಕಲನ ಮಾಡುವ ಗೋಜಿಗೆ ಹೋಗಿರಲಿಲ್ಲ.
ಕೊನೆಗೆ ಆಪ್ತರು, ಸ್ನೇಹಿತರಿಂದ ಸಹಾಯಹಸ್ತ ಸಿಕ್ಕಿತ್ತು. ನಂತರ ತೆರೆದ ಬಾಗಿಲು ಕವನ ಸಂಕಲನ ಹೊರತಂದಿದ್ದರು. ಅವರು ಸಾಕಷ್ಟು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರು’ ಎಂದರು.