ಬೆಂಗಳೂರು: ನಗರದ ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತಿರುವ ಅಶ್ವಾರೋಹಿ ಪಡೆ ಸಿಬ್ಬಂದಿ ಹೊಸ ಸಮವಸ್ತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಹೊಸ ಶೈಲಿಯ ಹೆಲ್ಮೆಟ್, ಕಪ್ಪು ಬಣ್ಣದ ಶರ್ಟ್ ಹಾಗೂ ತಿಳಿ ಖಾಕಿ ಬಣ್ಣದ ಪ್ಯಾಂಟು ತೊಟ್ಟು ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ.
‘ಮೊದಲು ಪೊಲೀಸರ ಸಾಮಾನ್ಯ ಸಮವಸ್ತ್ರವನ್ನೇ ಈ ಸಿಬ್ಬಂದಿ ಧರಿಸುತ್ತಿದ್ದರು. ಅದು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ, ಹೊಸ ಸಮವಸ್ತ್ರ ನೀಡಿದ್ದೇವೆ’ ಎಂದು ಸಶಸ್ತ್ರ ಮೀಸಲು ಪಡೆ ಡಿಸಿಪಿ ಕಿಶೋರ್ ಬಾಬು ಹೇಳಿದರು.
ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕೇಂದ್ರದಲ್ಲಿ ನಾಲ್ಕು ಕುದುರೆಗಳಿವೆ. ಕಬ್ಬನ್ ಉದ್ಯಾನ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ಗಸ್ತು ತಿರುಗುತ್ತಿವೆ. ಆ ಸ್ಥಳಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವು ನೀಡಲು ಈ ‘ಅಶ್ವಾರೋಹಿ ಪಡೆಯ ಗಸ್ತು’ ಆರಂಭಿಸಲಾಗಿದೆ