ಬೆಂಗಳೂರು: ರಾಮನಾಥ್ ಕೋವಿಂದ್ ಅವರನ್ನು ಅಭಿನಂದಿಸಲು ತಮಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕೋಲಿ ಸಮಾಜದ ಕೆಲವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆಯಿತು.
ಲಿಂಬಾವಳಿ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಸಭೆ ಮುಗಿಸಿಕೊಂಡು ಕೋವಿಂದ್ ಅವರು ತೆರಳಿದ ಬಳಿಕ ಲಿಂಬಾವಳಿ ಅವರನ್ನು ತಡೆದ ಕೆಲವರು ಅಂಗಿ ಹಿಡಿದು ಎಳೆದಾಡಿದರು.
‘ಕೋವಿಂದ್ ಅವರನ್ನು ಭೇಟಿ ಮಾಡದಂತೆ ನಮ್ಮನ್ನು ಉದ್ದೇಶಪೂರ್ವಕವಾಗಿ ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಘೇರಾವ್ ಮಾಡಿ ತಳ್ಳಾಡಿದರು. ಪೊಲೀಸರು ಮತ್ತು ಅಂಗರಕ್ಷಕರ ಸಹಾಯದಿಂದ ಬಿಡಿಸಿಕೊಂಡು ಲಿಂಬಾವಳಿ ಕಾರು ಹತ್ತಿ ಹೊರಟರು.
ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬೋವಿ ಸಮಾಜದ ಮುಖಂಡ ನಿವೃತ್ತ ಡಿಸಿಪಿ ತಿಮ್ಮಪ್ಪ ಅವರಿಂದ ಲಿಂಬಾವಳಿ ₹ 2 ಕೋಟಿ ಪಡೆದಿದ್ದಾರೆ ಎಂದು ವೆಂಕಟೇಶ ಮೌರ್ಯ ಆರೋಪ ಮಾಡಿದ್ದರು.
ಅನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಮೌರ್ಯ ಅವರನ್ನು ಅಮಾನತು ಮಾಡಲಾಗಿತ್ತು. ಮೌರ್ಯ ಬೆಂಬಲಿಗರೇ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅದನ್ನು ಮೌರ್ಯ ಬೆಂಬಲಿಗರು ತಳ್ಳಿಹಾಕಿದ್ದಾರೆ.