ಬೆಂಗಳೂರು: ನಗರದ ಕನಕ ಗುರುಪೀಠದ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಪ್ರಥಮ ಪೀಠಾಧ್ಯಕ್ಷ ಬೀರೇಂದ್ರ ಕೇಶವ ತಾರಕಾನಂದಪುರಿ ಅವರ 11ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೀಠದ ಕಲಬುರ್ಗಿ ಶಾಖಾ ಮಠದ ಸಿದ್ದರಾಮನಂದ ಸ್ವಾಮೀಜಿ ಮಾತನಾಡಿ, ‘ಬೀರೇಂದ್ರ ಕೇಶವ ತಾರಕಾನಂದಪುರಿ ಅವರು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಸಮುದಾಯಕ್ಕೆ ಶೈಕ್ಷಣಿಕ, ಧಾರ್ಮಿಕ ನೆಲೆಗಟ್ಟು ಒದಗಿಸಿದ ಮಹಾನ್ ಚೇತನ’ ಎಂದು ಬಣ್ಣಿಸಿದರು.
ಕೆ.ಆರ್.ನಗರದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ‘ಗುರುಪೀಠ ಸ್ಥಾಪನೆಗೆ ರಾಜ್ಯದ ಎಲ್ಲ ಕುರುಬ ನಾಯಕರ ಕೊಡುಗೆ ಇದೆ. ಅಂದು ಮಠ ಕಟ್ಟದಿದ್ದರೆ, ಇಂದು ನಾವು ಮೂಲೆ ಗುಂಪಾಗುತ್ತಿದ್ದೆವು. ಆದರೂ ನಾವು ಇನ್ನೂ ಹಿಂದುಳಿದಿದ್ದೇವೆ. ಹೀಗಾಗಿ ಎಲ್ಲರೂ ಸಂಘಟಿತರಾಗಬೇಕು’ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಬಿ.ಕೆ.ರವಿ, ‘ಹಾಲುಮತ ಎಂಬುದು ಜಗದ ಸಂಸ್ಕೃತಿಗಳ ಆದಿಯಾಗಿದೆ. ಆದಿವಾಸಿ ಬುಡಕಟ್ಟು ಹಿನ್ನೆಲೆಯಿಂದ ಬಂದ ದ್ರಾವಿಡ ಸಂಸ್ಕೃತಿಯ ಒಂದು ಭಾಗವಾಗಿದೆ’ ಎಂದರು.