ಬೀಜಿಂಗ್: ‘ಭಾರತದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಚುನಾಯಿತರಾದ ನಂತರ ರಾಷ್ಟ್ರೀಯವಾದವು ಉತ್ತುಂಗಕ್ಕೇರಿದ್ದು, ಇದು ಚೀನಾದ ವಿರುದ್ಧದ ಧೋರಣೆಗಳನ್ನು ಬೆಳೆಸುತ್ತಿದೆ’ ಎಂದು ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್ ಲೇಖನ ಒಂದರಲ್ಲಿ ಪ್ರಸ್ತಾಪಿಸಿದೆ.
‘1962ರ ಯುದ್ಧದ ಸೋಲಿನ ನಂತರ ಕೆಲ ಭಾರತೀಯರು ಚೀನಾ ಜತೆಗಿನ ವ್ಯವಹಾರಗಳಲ್ಲಿ ಶೂನ್ಯ ಮನಸ್ಥಿತಿ ಹೊಂದಿದ್ದಾರೆ. ಆ ಯುದ್ಧದಲ್ಲಿ ಅನುಭವಿಸಿದ ನೋವಿನಿಂದಾಗಿ ಚೀನಾವನ್ನು ಸದಾ ಅನುಮಾನದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ’ ಎಂದು ಪತ್ರಿಕೆ ಉಲ್ಲೇಖಿಸಿದೆ.
‘ಉಭಯ ದೇಶಗಳ ನಡುವಣ ಗಡಿ ಸಮಸ್ಯೆ ಆರಂಭವಾದಾಗಿನಿಂದ ಭಾರತದ ರಾಷ್ಟ್ರೀಯವಾದಿ ಮನಸ್ಥಿತಿಯು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಪ್ರಧಾನ ಮಂತ್ರಿ ಚುನಾವಣೆ ಬಳಿಕ ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದು ಹೇಳಿಕೊಂಡಿದೆ.
ಭಾರತ ರಾಜತಾಂತ್ರಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನಗಳ ವಿಚಾರದಲ್ಲಿ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮಂದಾಗಿದೆ ಎಂದು ಸಹ ಅಭಿಪ್ರಾಯಪಟ್ಟಿದೆ.
‘ದೋಕಲಾ ಪ್ರದೇಶದಲ್ಲಿ ಉಂಟಾಗಿರುವ ಗಡಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹಿಂದೂ ರಾಷ್ಟ್ರೀಯ ವಾದಿಗಳು ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಡುತ್ತಿದ್ದಾರೆ. ಧಾರ್ಮಿಕ ರಾಷ್ಟ್ರೀಯವಾದಿಗಳ ಹೋರಾಟ ತೀವ್ರವಾದರೆ ಮೋದಿ ಸರ್ಕಾರದಿಂದ ಅವರನ್ನು ತಡೆಯಲು ಸಾಧ್ಯವಿಲ್ಲ. ಸದ್ಯ 2014ರಲ್ಲಿ ಅಧಿಕಾರಕ್ಕೆ ಏರಿದಾಗಿನಿಂದ ದೇಶದಾದ್ಯಂತ ನಡೆಯುತ್ತಿರುವ ಮುಸ್ಲಿಂರ ವಿರುದ್ಧದ ದಾಳಿಗಳನ್ನು ಮೋದಿ ಸರ್ಕಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ.
ಧಾರ್ಮಿಕ ರಾಷ್ಟ್ರೀಯವಾದಿಗಳ ವಿಚಾರದಲ್ಲಿ ಭಾರತ ಎಚ್ಚರ ವಹಿಸಿ, ಇದರಿಂದ ಎರಡೂ ದೇಶಗಳು ಯುದ್ಧ ಮಾಡುವುದನ್ನು ತಪ್ಪಿಸಬೇಕು’ ಎಂದು ಎಚ್ಚರಿಕೆಯ ದಾಟಿಯಲ್ಲಿ ಲೇಖನ ಪ್ರಕಟಿಸಿದೆ.