ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್, ಹಿರೇಕೆರೂರಿನಲ್ಲಿ ಮಳೆ

Last Updated 1 ಅಕ್ಟೋಬರ್ 2017, 7:20 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಹಾನಗಲ್ ಹಾಗೂ ಹಿರೇಕರೂರಿನಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಹಾವೇರಿ ಸೇರಿದಂತೆರಾಣೆಬೆನ್ನೂರು, ಶಿಗ್ಗಾವಿ ಹಾಗೂ ಸವಣೂರ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ. ಬ್ಯಾಡಗಿ ತಾಲ್ಲೂಕಿನಲ್ಲಿ ಜಿಟಿಜಿಟಿ ಮಳೆ ಸುರಿದಿದೆ.

ಭಾರಿ ಮಳೆ (ಹಾನಗಲ್‌ ವರದಿ): ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ರಭಸದ ಮಳೆಗೆ ಚರಂಡಿಗಳು ತುಂಬಿ ಹರಿದವು. ಒಂದು ತಾಸಿಗೂ ಅಧಿಕ ಸಮಯ ಸುರಿದ ಮಳೆಯು ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿತು.

ಇಲ್ಲಿನ ನವನಗರ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ ಎರಡು ಮನೆಗಳು ಹಾನಿಗೊಂಡಿವೆ. ಚರಂಡಿಗಳು ಭರ್ತಿಯಾಗಿ ಈ ಭಾಗದ ಮನೆಗಳಿಗೆ ನೀರು ನುಗ್ಗಿದೆ. ಮೊಣಕಾಲು ಮಟ್ಟಕ್ಕೆ ಮನೆಗಳಲ್ಲಿ ನೀರು ನಿಂತುಕೊಂಡು ವಿಜಯದಶಮಿ ಹಬ್ಬದ ಸಡಗರಕ್ಕೆ ತಣ್ಣೀರೆರಚಿತು.

ಅದೇ ರೀತಿ ಕುಮಾರೇಶ್ವರ ನಗರದಲ್ಲಿಯೂ ಮನೆಗಳಿಗೆ ಮಳೆಯ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಳಿಸಿತು. ಈ ಭಾಗದಲ್ಲಿ ರೋಶನಿ ಸಂಸ್ಥೆಗೆ ಹೊಂದಿಕೊಂಡ ಖಾಲಿ ಜಾಗವು ಕೆರೆಯಂತೆ ಭಾಸವಾಗುತ್ತಿತ್ತು. ಬೆಳಿಗ್ಗೆಯಿಂದ ಮೋಡ ಮುಸುಕಿದಂಥ ವಾತಾವರಣ ಇತ್ತು. ಸಂಜೆ 4 ಗಂಟೆಯ ಹೊತ್ತಿಗೆ ಜೋರಾಗಿ ಮಳೆ ಸುರಿಯಿತು.

ವಿಜಯದಶಮಿ ಅಂಗವಾಗಿ ಪ್ರತಿವರ್ಷದ ಸಂಪ್ರದಾಯದಂತೆ ಪಟ್ಟಣದ ಎಲ್ಲ ದೇವಸ್ಥಾನಗಳ ದೇವರುಗಳನ್ನು ಪಲ್ಲಕ್ಕಿಯಲ್ಲಿ (ಪಾಲಕಿ) ಹೊತ್ತು ಪಟ್ಟಣದ ಹೊರಭಾಗದ ಪಿಳ್ಳನಕಟ್ಟಿ ಮಾರುತಿ ದೇವಸ್ಥಾನದ ಆವರಣದಲ್ಲಿರುವ ಸಮಿವೃಕ್ಷಕ್ಕೆ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ಕೆ ಮಳೆ ಸ್ವಲ್ಪ ಅಡಚಣೆ ಉಂಟು ಮಾಡಿತು.

ರಭಸದ ಮಳೆಯಲ್ಲಿಯೇ ಪಟ್ಟಣದ ಪ್ರಮುಖರು, ಭಕ್ತರು ಆಯಾ ದೇವಸ್ಥಾನಗಳ ಪಲ್ಲಕ್ಕಿಗಳನ್ನು ಹೊತ್ತು ಬಿರುಸಿನ ವೇಗದಲ್ಲಿ ಪಿಳ್ಳನಕಟ್ಟೆ ಮಾರುತಿ ದೇವಸ್ಥಾನಕ್ಕೆ ತೆರಳಿ ಪದ್ಧತಿ ಪೂರ್ಣಗೊಳಿಸಿದರು.

ಇನ್ನು, ತಾಲ್ಲೂಕಿನ ಬಮ್ಮನಹಳ್ಳಿ ಹೊಬಳಿ ಭಾಗದಲ್ಲಿ ಗುಡುಗು–ಸಿಡಿಲು ಸಹಿತ ಕೆಲಹೊತ್ತು ಮಳೆಯಾಗಿದೆ. ಯಳವಟ್ಟಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಯೊಂದು ಜಖಂಗೊಂಡಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೃತಕ ನೆರೆ ಅನುಭವ: ‘ಮಳೆಯ ಅಬ್ಬರಕ್ಕೆ ಕುಮಾರೇಶ್ವರ ನಗರಕ್ಕೆ ಕೃತಕ ನೆರೆ ಬಂದಂತಾಗಿದೆ. ಇಡೀ ಪ್ರದೇಶ ಜಲಾವೃತವಾಗಿದೆ, ಮನೆಗಳಲ್ಲಿ ನೀರು ನಿಂತುಕೊಂಡು ದಿನಸಿ ಸೇರಿದಂತೆ ಸಾಕಷ್ಟು ಸಾಮಗ್ರಿಗಳು ಹಾನಿಯಾಗಿವೆ. ಈ ಭಾಗದ ಖಾಲಿ ಜಾಗದಲ್ಲಿ ಟೆಂಟ್‌ ಹಾಕಿಕೊಂಡಿರುವ ವಲಸೆ ವ್ಯಾಪಾರಿಗಳ ತಂಡ ದಿಕ್ಕೆಟ್ಟಿದೆ.

ಇಷ್ಟೆಲ್ಲ ಅವಾಂತರಕ್ಕೆ ಹೂಳು ತುಂಬಿರುವ ಇಲ್ಲಿನ ಚರಂಡಿಗಳೇ ಕಾರಣ. ಪುರಸಭೆ ಅವುಗಳತ್ತ ಗಮನ ಹರಿಸುತ್ತಿಲ್ಲ’ ಎಂದು ಕುಮಾರೇಶ್ವರ ನಗರ ನಿವಾಸಿ ಸಿ.ಡಿಂಪಲ್ ಡಿಸೋಜಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT