ಸಾಲಿಗ್ರಾಮ (ಮೈಸೂರು ಜಿಲ್ಲೆ): ಕೆ.ಆರ್.ನಗರ ತಾಲ್ಲೂಕಿನ ಬಳ್ಳೂರು ಗ್ರಾಮದ ಬಳಿಯ ಹಾರಂಗಿ ನಾಲೆಯ ಏರಿ ಒಡೆದು ನೂರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಭತ್ತ, ಜೋಳ, ರಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಹಾರಂಗಿ ನಾಲೆಗೆ ನೀರು ಹರಿಯ ಬಿಟ್ಟಿರುವುದು ಹಾಗೂ ಅಧಿಕ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಏರಿ ಒಡೆದಿದೆ. ಹಲವು ರೈತರು ಬೆಳೆ ಕಳೆದುಕೊಂಡಿದ್ದಾರೆ.
ಎರಡು ದಿನಗಳಿಂದ ನಾಲೆ ನೀರು ರೈತರ ಜಮೀನಿನಲ್ಲಿ ಹರಿದು ಹೋಗುತ್ತಿದ್ದರೂ ಸಂಬಂಧಪಟ್ಟ ಎಂಜಿನಿಯರ್ಗಳು ಇತ್ತ ಕಡೆ ತಿರುಗಿ ನೋಡುತ್ತಿಲ್ಲ ಎಂದು ಬೆಳೆ ಕಳೆದುಕೊಂಡಿರುವ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ನಾಲೆಯಲ್ಲಿ ನೀರಿನ ಹರಿವು ಅಧಿಕವಾಗಿರುವ ಹಿನ್ನೆಲೆಯಲ್ಲಿ ನಾವು ಬೆಳೆ ಕಳೆದುಕೊಳ್ಳುವಂತೆ ಆಗಿದೆ. ಇದಕ್ಕೆ ಎಂಜಿನಿಯರ್ಗಳ ಉದಾಸೀನವೂ ಕಾರಣವಾಗಿದೆ’ ಎಂದು ರೈತ ರಾಮೇಗೌಡ ಅವರು ದೂರಿದರು.
‘ನಾಲೆ ನೀರಿನಿಂದ ಬೆಳೆಯಷ್ಟೇ ಅಲ್ಲ, ಫಲವತ್ತಾದ ಮಣ್ಣು ಕೂಡಾಕೊಚ್ಚಿಕೊಂಡು ಹೋಗಿದೆ. ಇದನ್ನು ಸರಿಪಡಿಸಲು ನಮಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದನ್ನು ಹೇಗೆ ಮಾಡುವುದು’ ಎಂದು ರೈತರು ಆತಂಕದಿಂದ ಹೇಳಿದರು.