ಯಾದಗಿರಿ: ಜಿಲ್ಲೆಯ ವಿವಿಧೆಡೆ ಭಾನುವಾರ ಇಡೀ ರಾತ್ರಿ ಜೋರು ಮಳೆಯಾಗಿದ್ದು, ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಯಾದಗಿರಿ ತಾಲ್ಲೂಕಿನ ಕೊಂಕಲ್, ಹತ್ತಿಕುಣಿ, ಗುರುಮಠಕಲ್, ಅಜಲಾಪುರ, ಸೈದಾಪುರ ಹೋಬಳಿಗಳಲ್ಲಿ ಭಾರೀ ಮಳೆಯಾಗಿದ್ದು, ಕೆರೆಗಳು ತುಂಬಿವೆ.
ತಾಲ್ಲೂಕಿನ ಯರಗೋಳ ಹೋಬಳಿಯ ಥಾನುನಾಯ್ಕ ತಾಂಡಾದ ಹಳ್ಳತುಂಬಿ ಹರಿದಿದ್ದು, ಶಾಲಾ ಮಕ್ಕಳಿಗೆ ಸಂಕಷ್ಟ ತಂದೊಡ್ಡಿದೆ. ಮಂಗಳವಾರ ಹಳ್ಳ ತುಂಬಿ ಹರಿದಿದ್ದರಿಂದ ತಾಂಡಾದ ಪ್ರಾಥಮಿಕ ಶಾಲೆಯ ಶಿಕ್ಷಕ ಗಾಂಧಿ ಜಯಂತಿ ಆಚರಣೆಗೆ ಗೈರು ಹಾಜರಾಗಿದ್ದರು. ಇದರಿಂದ ಗ್ರಾಮಸ್ಥರು ಗಾಂಧಿ ಜಯಂತಿ ಆಚರಣೆಗೆ ಸಿದ್ಧರಾಗಿದ್ದ ಮಕ್ಕಳನ್ನು ಮೂರು ಕಿಲೋ ಮೀಟರ್ ದೂರದ ಯರಗೋಳ ಗ್ರಾಮದ ಶಾಲೆಗೆ ಕರೆ ತರಬೇಕಾಯಿತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ಗ್ರಾಮಸ್ಥರೇ ಬಂದು ಮಕ್ಕಳನ್ನು ಹಳ್ಳ ದಾಟಿಸಿದರು.
ಸೇತುವೆ ನಿರ್ಮಾಣಕ್ಕೆ ಆಗ್ರಹ:
ಜೋರು ಮಳೆಯಾದಾಗಲೆಲ್ಲ ಥಾನುನಾಯ್ಕ ತಾಂಡಾ– ಯರಗೋಳ ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಕೂಡಲೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಥಾನು ನಾಯ್ಕ ತಾಂಡಾದ ಮುಖಂಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಮಳೆಯಿಂದಾಗಿ ರಾಯಚೂರು ಜಿಲ್ಲೆ ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ 15 ಮನೆಗಳು ಕುಸಿದಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಸೋಮವಾರ ಸಂಜೆ ಬೀದರ್ನಲ್ಲಿ ಉತ್ತಮ ಮಳೆ ಸುರಿಯಿತು.