ಮಂಡ್ಯ: ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಹೊರವಲಯದಲ್ಲಿ ₹ 100 ಮುಖಬೆಲೆಯ ನೋಟುಗಳ ಚೂರುಗಳಿದ್ದ ಚೀಲವೊಂದನ್ನು ರಸ್ತೆಪಕ್ಕದಲ್ಲಿ ಬಿಸಾಡಿರುವುದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗಂಟುಕಟ್ಟಿದ ಗೋಣಿ ಚೀಲ ಎರಡು ದಿನಗಳಿಂದಲೂ ಗ್ರಾಮದ ನಿಂಗೇಗೌಡ ಅವರಿಗೆ ಸೇರಿದ ಜಮೀನಿನ ಸಮೀಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಬಿದ್ದಿದೆ. ಇದನ್ನು ಯಾರೂ ಗಮನಿಸಿಲ್ಲ.
ಜಾನುವಾರುಗಳು ಚೀಲದ ಮೇಲೆ ಓಡಾಡಿದಾಗ ಚೀಲ ಹರಿದಿದ್ದು, ನೋಟಿನ ತುಂಡಾಗಿದ್ದ ಚೂರುಗಳು ಹೊರಗೆ ಚೆಲ್ಲಿವೆ. ಆಗ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿದೆ.
‘ಮೇಲ್ನೋಟಕ್ಕೆ ನೋಟುಗಳು ಅಸಲಿ ಎನಿಸುತ್ತವೆ. ಪರೀಕ್ಷೆಯ ನಂತರ ಸತ್ಯಾಂಶ ತಿಳಿಯುತ್ತದೆ. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ತನಿಖೆ ನಡೆದಿದೆ’ ಎಂದು ಪರಿಶೀಲನೆ ನಡೆಸಿದ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಜರುದ್ದೀನ್ ತಿಳಿಸಿದರು.