ಮಡಿಕೇರಿ: ಜಿಲ್ಲೆಯ ಮೂರ್ನಾಡು ಕ್ಲೀನ್ ಕೂರ್ಗ್ ಸಂಸ್ಥೆ ವತಿಯಿಂದ ಶನಿವಾರ ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು. ರಾಜಾಸೀಟ್ ಹಾಗೂ ಅಬ್ಬಿ ಜಲಪಾತದ ಬಳಿ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸದಸ್ಯರು ಒಟ್ಟಾಗಿ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ನಗರದ ರಾಜಾಸೀಟ್ ಮತ್ತು ಅಬ್ಬಿಫಾಲ್ಸ್ನಲ್ಲಿ ಮೂಟೆಗಟ್ಟಲೇ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟಲಿಗಳು ದೊರೆತವು. ಅಭಿಯಾನಕ್ಕೆ ರಾಜಾಸೀಟ್ನಲ್ಲಿ ಚಾಲನೆ ದೊರಕಿತು. ಮಡಿಕೇರಿ ಲಯನ್ಸ್ ಕ್ಲಬ್, ರೋಟರಿ ಮಿಸ್ಟಿ ಹಿಲ್ಸ್, ಛೇಂಬರ್ ಆಫ್ ಕಾಮರ್ಸ್, ಲಯನೆಸ್ ಕ್ಲಬ್ ಸದಸ್ಯರು ಹಾಗೂ ಸೇಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದರು.
ಕ್ಲೀನ್ ಕೂರ್ಗ್ ಸಂಸ್ಥೆಯ ಮುಖ್ಯಸ್ಥ ಬಡುವಂಡ ಅರುಣ್ ಅಪ್ಪಚ್ಚು ಮಾತನಾಡಿ, ಕೊಡಗು ಜಿಲ್ಲೆ ವಿಶ್ವದಲ್ಲಿಯೇ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಹೊಂದಿದೆ; ಈ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ– ಬೆಳೆಸುವ ಕಾರ್ಯ ಆಗಬೇಕು. ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಸಂರಕ್ಷಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಹೇಳಿದರು.
ಕ್ಲೀನ್ ಕೂರ್ಗ್ ವತಿಯಿಂದ ಪ್ರತಿವರ್ಷ ವಿವಿಧೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಾಜಾಸೀಟ್ನಿಂದ 14 ಸೈಕಲ್ಗಳಲ್ಲಿ ಕ್ಲೀನ್ ಕೂರ್ಗ್ ಸಂಸ್ಥೆಯ ಸದಸ್ಯರು, ಸ್ವಚ್ಛತಾ ಸಂದೇಶ ಸಾರುತ್ತಾ ಅಬ್ಬಿ ಜಲಪಾತದ ತನಕ ಸೈಕ್ಲಿಂಗ್ ನಡೆಸಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದರು.
ಇರಾನ್ ಮೂಲದ ಪರಿಸರ ಪ್ರೇಮಿ ನಾದಿರ್ ಖಾನ್ ಸೈಕ್ಲಿಂಗ್ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಕೊಡಗಿನ ನಿಸರ್ಗ ರಕ್ಷಣೆಯ ಸಂದೇಶ ಎಲ್ಲರಿಗೂ ತಲುಪಬೇಕು. ಸ್ವಚ್ಛತಾ ಅಭಿಯಾನ ನಡೆದಾಗಲೆಲ್ಲಾ ನಾನು ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಸ್ವಚ್ಛತೆ ಬಗ್ಗೆ ಒಗ್ಗಟ್ಟಿನ ಕಾರ್ಯ ಯೋಜನೆ ಆಗಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬೊಳ್ಳಪ್ಪ, ಕಾರ್ಯದರ್ಶಿ ಮಧುಕರ್, ಲಯನೆಸ್ ಅಧ್ಯಕ್ಷೆ ಕವಿತಾ, ಕಾರ್ಯದರ್ಶಿ ಗೀತಾ ಮಧುಕರ್, ಮೋಹನ್ ದಾಸ್, ಎಂ.ಎ. ನಿರಂಜನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ನಿರ್ದೇಶಕರಾದ ದಿನೇಶ್ ಕಾರ್ಯಪ್ಪ, ಕಿರಣ್ ರೈ, ಎಂ.ಪಿ. ನಾಗರಾಜ್, ಕೆ.ಕೆ. ವಿಶ್ವನಾಥ್, ಮಧುಸೂದನ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಾನಪದ ಪರಿಷತ್ ಖಜಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.