ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನ್‌ ಪ್ರೆಸ್‌ ಮುಚ್ಚಲು ಕೇಂದ್ರ ನಿರ್ಧಾರ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಜರ್ಮನ್‌ ಪ್ರೆಸ್‌ ಸೇರಿದಂತೆ ದಕ್ಷಿಣ ಭಾರತದಲ್ಲಿರುವ ಕೇಂದ್ರ ಸರ್ಕಾರದ ಸೌಮ್ಯದ ಮೂರು ಮುದ್ರಣಾಲಯಗಳನ್ನು ಮುಚ್ಚಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಮೈಸೂರಿನಲ್ಲಿ 1960ರಲ್ಲಿ ಆರಂಭವಾಗಿದ್ದ ಜರ್ಮನ್‌ ಪ್ರೆಸ್‌ ಕೇಂದ್ರ ಸರ್ಕಾರದ ಹಲವು ಸಂಸ್ಥೆಗಳ ಮುದ್ರಣ ಕಾರ್ಯವನ್ನು ಮಾಡುತಿತ್ತು. ಈಚಿನ ದಿನಗಳಲ್ಲಿ ನೌಕರರ ಕೊರತೆಯಿಂದ ಬಳಲುತ್ತಿದ್ದ ಮುದ್ರಣಾಲಯವನ್ನು ಉತ್ತರ ಭಾರತದ ಮುದ್ರಣಾಲಯಗಳ ಜತೆಗೆ ವಿಲೀನಗೊಳಿಸಿ, ಇಲ್ಲಿನ ನೌಕರರನ್ನು ವರ್ಗಾವಣೆ ಮಾಡಲು ಮುಂದಾಗಿರುವುದಕ್ಕೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.

ಜರ್ಮನ್‌ ‍ಪ್ರೆಸ್‌ನಲ್ಲಿ ಹಾಲಿ ಒಟ್ಟು 26 ನೌಕರರು ಇದ್ದಾರೆ. ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಆರ್‌ಪಿಎಫ್‌), ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಂಸ್ಥೆಗಳ ಮುದ್ರಣ ಕಾರ್ಯವನ್ನು ಇಲ್ಲಿ ನಡೆಸಲಾಗುತ್ತಿದೆ. ಜರ್ಮನಿಯಿಂದ ಆಮದು ಮಾಡಿಕೊಂಡಿರುವ 4 ವೆಬ್‌ ಆಫ್‌ಸೆಟ್‌ ಮುದ್ರಣ ಯಂತ್ರಗಳು ಇಲ್ಲಿದ್ದು, ಉತ್ಕೃಷ್ಟ ಗುಣಮಟ್ಟದ ಮುದ್ರಣ ಕಾರ್ಯ ಆಗುತ್ತಿದೆ. ಮುದ್ರಣಕ್ಕೆ ಬೇಕಾದ ಅಗತ್ಯ ಕಾಗದ, ಶಾಹಿ ಸಹ ಸಾಕಷ್ಟು ಇದ್ದು ಕಾರ್ಖಾನೆಯನ್ನು ಮುಚ್ಚಿದರೆ ಜೀವನ ಅತಂತ್ರವಾಗಲಿದೆ ಎಂದು ನೌಕರರು ಹೇಳುತ್ತಾರೆ.

ಒಟ್ಟು ಮೂರು ಕಾರ್ಖಾನೆ: ದಕ್ಷಿಣ ಭಾರತದಲ್ಲಿ ಕೇಂದ್ರ ಸರ್ಕಾರದ ಒಟ್ಟು ಮೂರು ಮುದ್ರಣಾಯಲಗಳಿವೆ. ಮೈಸೂರು, ಕೊರಟ್ಟಿ (ಕೇರಳ), ಕೊಯಮತ್ತೂರಿನಲ್ಲಿ (ತಮಿಳುನಾಡು) ಮುದ್ರಣಾಯಲಗಳಿದ್ದು, ಸೆ. 20ರಂದು ಇವನ್ನು ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಎಲ್ಲ ಮುದ್ರಣಾಲಯಗಳ ಕಾರ್ಮಿಕರನ್ನು ಉತ್ತರ ಭಾರತದ ಮುದ್ರಣಾಲಯಗಳಿಗೆ ವರ್ಗಾವಣೆ ಮಾಡುವ ಭೀತಿ ಇದೆ ಎಂದು ಕಾರ್ಖಾನೆಯ ನೌಕರರೂ ಆದ, ಕೇಂದ್ರ ಸರ್ಕಾರದ ಮುದ್ರಣಾಲಯಗಳ ನೌಕರರ ಸಂಘದ ಅಧ್ಯಕ್ಷ ಎಚ್‌.ಶಂಕರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುದ್ರಣಾಯಲಕ್ಕೆ ಕೇಂದ್ರ ಸರ್ಕಾರದ ಯಾವ ನೆರವೂ ಬೇಕಿಲ್ಲ. ಉತ್ತಮ ಸ್ಥಿತಿಯಲ್ಲಿರುವ ಮುದ್ರಣ ಯಂತ್ರಗಳಿವೆ. ನಮಗೆ ಬೇಕಿರುವುದು ಹೆಚ್ಚಿನ ಮಾನವ ಸಂಪನ್ಮೂಲ. ಮತ್ತಷ್ಟು ಕಾರ್ಮಿಕರನ್ನು ನೇಮಿಸಿದರೆ ಅತ್ಯುತ್ತಮ ಸೇವೆಯನ್ನು ಮುದ್ರಣಾಲಯ ನೀಡಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT