ಬೆಂಗಳೂರು: ‘ಜನರಕ್ಷಾ ಯಾತ್ರೆ ಹೆಸರಿನಲ್ಲಿ ಬಿಜೆಪಿ ಮುಖಂಡರು ಪುಂಡಾಟಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ಮೋದಿ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಹೆಚ್ಚುತ್ತಿದೆ. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿ ಜನರಕ್ಷಾ ಯಾತ್ರೆ ಆರಂಭಿಸಿದೆ’ ಎಂದು ಕಾರ್ಯಕರ್ತರು ಆರೋಪಿಸಿದರು.
‘ಬಸವನಗುಡಿಯ ಪಕ್ಷದ ಕಚೇರಿಗೆ (ಜ್ಯೋತಿಬಸು ಭವನ) ಮುತ್ತಿಗೆ ಹಾಕುವುದಾಗಿ ರಾಜ್ಯ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿಯ ಫ್ಯಾಸಿಸ್ಟ್ ಪ್ರವೃತ್ತಿಗೆ ಹಿಡಿದ ಕನ್ನಡಿ’ ಎಂದು ದೂರಿದರು.
ಪಕ್ಷದ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ, ‘ಸೈದ್ಧಾಂತಿಕವಾಗಿ ಪಕ್ಷ ಪ್ರಬಲವಾಗಿದೆ. ಮುತ್ತಿಗೆ ಹಾಕುವ ಮೂಲಕ ಸುಲಭವಾಗಿ ನಮ್ಮನ್ನು ಹೆದರಿಸಬಹುದು ಎಂದು ಬಿಜೆಪಿಯವರು ತಿಳಿದಿದ್ದಾರೆ. ಅವರ ಗೊಡ್ಡು ಬೆದರಿಕೆಗಳಿಗೆ ನಾವು ಬಗ್ಗಲ್ಲ’ ಎಂದರು.
ಜಿ.ಎನ್.ನಾಗರಾಜ್, ‘ಹಿಟ್ಲರ್ ಅಧಿಕಾರಕ್ಕೆ ಬಂದಾಕ್ಷಣ ಜರ್ಮನಿಯ ಕಾರ್ಮಿಕ ಸಂಘಟನೆಗಳ ಕಚೇರಿಗಳಿಗೆ ಮುತ್ತಿಗೆ ಹಾಕಿ ಅವುಗಳನ್ನು ನಾಶ ಮಾಡಿದ್ದ. ಅದೇ ಮಾದರಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ’ ಎಂದು ಕಿಡಿಕಾರಿದರು.
ಪಕ್ಷದ ಕಾರ್ಯದರ್ಶಿ ಕೆ.ಎನ್.ಉಮೇಶ್, ‘ಬಂಡವಾಳಶಾಹಿಗಳ ಪರವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಮೋದಿ ಸರ್ಕಾರ ಹೊರಟಿದೆ. ಅದರ ವಿರುದ್ಧ ಅವಿರತ ಹೋರಾಟ ಮಾಡುತ್ತಿರುವುದು ಸಿಪಿಐ ನೇತೃತ್ವದ ಸಿಐಟಿಯು. ಹೀಗಾಗಿ, ನಮ್ಮ ಮೇಲೆ ಬಿಜೆಪಿ ಪರೋಕ್ಷವಾಗಿ ದಾಳಿ ಮಾಡುತ್ತಿದೆ’ ಎಂದು ಆರೋಪಿಸಿದರು.