ಯಳಂದೂರು: ಕಳೆದ ಮೂರು ದಿನಗಳಿಂದ ಮಳೆ ಹಾಗೂ ನೀರಿನ ಪ್ರವಾಹಕ್ಕೆ ತುತ್ತಾಗಿದ್ದ ಕೆಸ್ತೂರು ಗ್ರಾಮ ಮಂಗಳವಾರ ಸಹಜ ಸ್ಥಿತಿಗೆ ತಲುಪಿತು. ಗ್ರಾಮದ ತಗ್ಗು ಪ್ರದೇಶಗಳ ಮನೆಗಳಿಗೆ 3 ದಿನಗಳಿಂದ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇದಕ್ಕೆ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿದ್ದೇ ಪ್ರಮುಖ ಕಾರಣವಾಗಿತ್ತು.
ಮಂಗಳವಾರ ನೀರಿನ ಹರಿವಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಸಂತ್ರಸ್ಥರು ಮನೆಗಳನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತರಾದರು. ಅಧಿಕಾರಿಗಳು ಸ್ಥಳದಲ್ಲಿದ್ದು ನೆರವಾಗಲು ಶಾಸಕ ಎಸ್. ಜಯಣ್ಣ ಮಾರ್ಗದರ್ಶನ ಮಾಡಿದರು.
ಮಂಗಳವಾರ 5 ಕುಟುಂಬಗಳ ಸದಸ್ಯರಿಗೆ ಬಿಸಿಎಂ ಹಾಸ್ಟೆಲ್ ನಲ್ಲಿ ಊಟದ ಸೌಲಭ್ಯವನ್ನು ಮಾಡಲಾಗಿದೆ. ಪರಿಸ್ಥಿತಿಯನ್ನು ನೋಡಿ ಸೌಲಭ್ಯ ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.