ಕೆಂಭಾವಿ: ಸಮೀಪದ ಮುದನೂರು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 12 ದಿನಗಳಿಂದ ಗೈರಾಗಿದ್ದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
‘ಕಳೆದ ತಿಂಗಳು ಮುದನೂರು ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಜಾಗೃತಿಗೆ ಗ್ರಾಮಸ್ಥರಿಗೆ ಹೂ ಕೊಟ್ಟು ಚಾಲನೆ ನೀಡಿ ಹೋದ ಅಭಿವೃದ್ಧಿ ಅಧಿಕಾರಿ ಅ.2ರ ಗಾಂಧಿ ಜಯಂತಿಗೂ ಬಂದಿಲ್ಲ ಎಂದು ಗ್ರಾಮಸ್ಥರು ದೂರವಾಣಿ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮತ್ತು ನನಗೆ ತಿಳಿಸಿದ ಕಾರಣ ಭೇಟಿ ನೀಡಿದ್ದೇನೆ’ ಎಂದು ಬಸನಗೌಡ ತಿಳಿಸಿದರು.
‘ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಾಜರಿ ಪುಸ್ತಕ ಪರಿಶೀಲಿಸಿದಾಗ ಸೆಪ್ಟೆಂಬರ್ 28ರಿಂದ ಪಿಡಿಒ ಗೈರಾಗಿರುವುದು ಕಂಡುಬಂದಿದೆ’ ಎಂದರು. ‘ಶೌಚಾಲಯ ಕಟ್ಟಿಸಿಕೊಂಡವರಿಗೆ ಹಣ ಪಾವತಿಯಾಗುತ್ತಿಲ್ಲ. ಪಂಚಾಯಿತಿಯಿಂದ ಯಾವುದೇ ಮಾಹಿತಿ ದೊರಕುತ್ತಿಲ್ಲ.
ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಈರಣ್ಣ ಬೂಸಾ ಹಾಗೂ ಗ್ರಾಮಸ್ಥರು, ಸಂಘಟನೆ ಮುಖಂಡರು ದೂರಿದರು.
ಗ್ರಾಮದ ಮುಖಂಡರಾದ ಬಸವಂತ್ರಾಯ ಚೌದ್ರಿ, ಈರಣ್ಣ ಬೂಸಾ, ಕೃಷ್ಣಾ ರಡ್ಡಿ ಇದ್ದರು.