ಹಾಸನ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಗುರುವಾರ ಭವಿಷ್ಯ ನುಡಿದಿದ್ದಾರೆ.
ಇಲ್ಲಿ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದ ಬಳಿಕ ದೇವಿಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ ಬರುವ ವಿಧಾನಸಭೆ ಚುನಾವಣೆ ಬಗ್ಗೆ ಭವಿಷ್ಯ ನುಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದು ಅವರೇ ಕಿಂಗ್ ಮೇಕರ್ ಆಗಲಿದ್ದಾರೆ. ಆದರೆ ಅವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು, ತಂದೆ ದೇವೇಗೌಡರ ಮಾತನ್ನು ಚಾಚೂ ತಪ್ಪದೆ ಪಾಲಿಸಬೇಕು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು ಎಂದು ಬ್ರಹ್ಮಾಂಡ ಗುರೂಜಿ ಸಲಹೆ ಮಾಡಿದರು.
ಕಾಂಗ್ರೆಸ್-ಬಿಜೆಪಿಗಿಂತ ಕುಮಾರಸ್ವಾಮಿ ಅವರ ಮೇಲೆ ಉತ್ತರ ಕರ್ನಾಟಕದ ಜನರು ನಂಬಿಕೆ ಇಟ್ಟಿದ್ದಾರೆ, ಅದನ್ನು ಅವರು ಉಳಿಸಿಕೊಳ್ಳಬೇಕು ಎಂದರು.
ಹಿತ್ತಾಳೆ ಕಿವಿಯಾದ ಯಡಿಯೂರಪ್ಪ
ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಪಲ್ಲಟ ಖಚಿತ, ಅವರ ಪಕ್ಷದಲ್ಲೇ ಅವರನ್ನು ಮುಗಿಸೋ ಹುನ್ನಾರ ನಡಯುತ್ತಿದೆ. ಯಡಿಯೂರಪ್ಪ ಅವರದು ಹಿತ್ತಾಳೆ ಕಿವಿ. ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದು, ಇದನ್ನು ನಿವಾರಿಸಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಪಕ್ಕ ಚೂರಿ ಹಾಕುವವರು ಇದ್ದಾರೆ
ಹಾಗೆಯೇ ಸಿಎಂ ಸಿದ್ದರಾಮಯ್ಯ ಅಕ್ಕಪಕ್ಕ ಚೂರಿ ಹಾಕುವವರು ಇದ್ದಾರೆ. ಕೆಲ ಕೆಟ್ಟ ಮಂತ್ರಿಗಳಿದ್ದಾರೆ. ಇದನ್ನು ಸರಿಪಡಿಸಿಕೊಂಡು ಹಗರಣ ರಹಿತ ಆಡಳಿತ ನೀಡಬೇಕು. ಅವರು ನಾಸ್ತಿಕರಲ್ಲ, ಬದಲಾಗಿ ಆಸ್ತಿಕರು ಎಂದು ಬ್ರಹ್ಮಾಂಡ ಗುರೂಜಿ ಪ್ರತಿಪಾದಿಸಿದರು.