ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿತ್ತಾಟಕ್ಕೆ ಆಸ್ಥಾನ ಬ್ರಾಹ್ಮಣರೇ ಕಾರಣ’

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ– ವೀರಶೈವ ಬಣಗಳ ವಿಭಜನೆಗೆ 19ನೇ ಶತಮಾನದ ಅಂತ್ಯದಲ್ಲಿ ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಬ್ರಾಹ್ಮಣರೇ ಕಾರಣ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಪ್ರತಿಪಾದಿಸಿದರು.

ಸ್ವತಂತ್ರ ಧರ್ಮ ಮಾನ್ಯತೆ ವಿಷಯಕ್ಕೆ ಸಂಬಂಧಿಸಿದಂತೆ ಲಿಂಗಾಯತ– ವೀರಶೈವ ಬಣಗಳ ಪ್ರಮುಖರು ಗುರುವಾರ ಇಲ್ಲಿನ ‘ಕ್ಯಾಪಿಟಲ್‌ ಹೋಟೆಲ್‌’ನಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ಮಾತನಾಡಿದ ಜಾಮದಾರ, ‘ಅಂದು ಬ್ರಿಟಿಷರಿಗೆ ಸಾಮಾಜಿಕ ಮಾಹಿತಿ ಒದಗಿಸುತ್ತಿದ್ದವರೇ ಬ್ರಾಹ್ಮಣರು. ಹೀಗಾಗಿ 1871ರ ಜನಗಣತಿಯಿಂದ ಮುಂದಿನ ಎಲ್ಲಾ ಜನಗಣತಿಗಳಲ್ಲಿಯೂ ಲಿಂಗಾಯತರನ್ನು ಅನ್ಯರು ಎಂದು ಗುರುತಿಸಿದರು. ನಂತರದ ದಿನಗಳಲ್ಲಿ ಲಿಂಗಾಯತ–ವೀರಶೈವ ಪ್ರತ್ಯೇಕವಾಗಿರಲು ದಾರಿ ಮಾಡಿಕೊಟ್ಟರು’ ಎಂದರು.

‘ಇಂದಿನ ಲಿಂಗಾಯತ–ವೀರಶೈವ ಬಣಗಳ ಆಚಾರ, ವಿಚಾರಗಳು ಬ್ರಾಹ್ಮಣಶಾಹಿಯ ಅನುಕರಣೆಯೇ ಆಗಿವೆ’ ಎಂದ ಅವರು, ‘ಕಾಲಾನಂತರದಲ್ಲಿ ಮುದ್ರಣ ಮಾಧ್ಯಮವೂ ಬ್ರಾಹ್ಮಣರ ಕೈಯ್ಯಲ್ಲಿ ಇದ್ದುದರಿಂದಲೇ ಇಡೀ ಸಮಾಜದ ದನಿಯನ್ನು ಅವರು ತಮ್ಮ ಮೂಗಿನ ನೇರಕ್ಕೆ ಬಿಂಬಿಸಿದರು. ಹೀಗಾಗಿ ನಮ್ಮ ಇಂದಿನ ಕಿತ್ತಾಟಕ್ಕೆ ಮೈಸೂರು ಆಸ್ಥಾನದ ಸಂಸ್ಕೃತ ವಿದ್ವಾಂಸರು ಬಿತ್ತಿದ ವಿಷಬೀಜವೇ ಕಾರಣ. ಇದಕ್ಕೆ 136 ವರ್ಷಗಳ ಚರಿತ್ರೆ ಇದೆ’ ಎಂದು ವಿವರಿಸಿದರು.

ನಿವೃತ್ತ ನ್ಯಾಯಮೂರ್ತಿಗಳೂ ಇರಲಿ: ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಸದಸ್ಯ ಕೋರೆ, ‘ನಮ್ಮ ನಿಲುವು ತಾರ್ತಿಕ ಅಂತ್ಯ ಮುಟ್ಟಬೇಕಾದರೆ ನಿವೃತ್ತ ನ್ಯಾಯಮೂರ್ತಿಗಳನ್ನು ಕರೆದು ಚರ್ಚಿಸಿ, ಅವರ ಅಭಿಪ್ರಾಯದಂತೆ ಮುನ್ನಡೆಯುವುದು ಒಳ್ಳೆಯದು’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ, ‘ಇಂದು ಲಿಂಗಾಯತರು ರಾಜಕೀಯವಾಗಿ ನಗಣ್ಯರಾಗುತ್ತಿದ್ದಾರೆ. ನಾವಿಲ್ಲಿ ಕಿತ್ತಾಡಿಕೊಳ್ಳುವ ಬದಲಿಗೆ ಒಟ್ಟಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕು’ ಎಂಬ ಸಲಹೆ ನೀಡಿದರು.

‘ಈಗಾಗಲೇ ವೀರಶೈವ– ಲಿಂಗಾಯತ ಎಂದು ಸ್ವತಂತ್ರ ಧರ್ಮದ ಮಾನ್ಯತೆ ಕೋರಿದ್ದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಹೀಗಾಗಿ ಈ ಬಾರಿಯ ನಮ್ಮ ಮಾನ್ಯತೆ ಸ್ಪಷ್ಟವಾಗಿ ಇರಲಿ. ಮತ್ತೆ ಸಾಹಿತ್ಯ, ಪುರಾಣ ಕೆದಕುತ್ತಾ ಕೂರುವುದು ಬೇಡ’ ಎಂದು ಬಿದರಿ ಕಿವಿಮಾತು ಹೇಳಿದರು.

ಸಚಿವ ಈಶ್ವರ ಖಂಡ್ರೆ, ‘ಎರಡೂ ಬಣಗಳು ಒಟ್ಟಾಗಿ ಹೋಗಬೇಕು ಎಂಬುದೇ ಎಲ್ಲರ ಆಶಯ’ ಎಂದರು.

ಲಿಂಗಾಯತ ಬಣದ ಪರವಾಗಿ ಸಚಿವ ವಿನಯ ಕುಲಕರ್ಣಿ, ಮಹದೇವಪ್ಪ, ಜಯ್ಯಣ್ಣ, ಜಿ.ಬಿ.ಪಾಟೀಲ, ಎ.ಪಿ.ಬಸವರಾಜು ಹಾಗೂ ವೀರಶೈವ ಬಣದಿಂದ ಸಚಿವ ಈಶ್ವರ ಖಂಡ್ರೆ, ಎನ್‌.ತಿಪ್ಪಣ್ಣ, ರಾಣಿ ಸತೀಶ್‌, ನಂದಿಶ್‌ ಹಂಚೆ, ಮಲ್ಲಿಕಾರ್ಜುನ, ಶಿವಕುಮಾರ ಸ್ವಾಮಿ, ಚಂದ್ರಶೇಖರ ಸೇರಿದಂತೆ 40ಕ್ಕೂ ಹೆಚ್ಚು ಸಾಹಿತಿಗಳು, ವಿದ್ವಾಂಸರು, ಪ್ರಮುಖರು ಇದ್ದರು.

ಬರ್ಖಾಸ್ತುಗೊಂಡ ಸಭೆ ಮತ್ತೆ ಮುಂದುವರಿಕೆ
ಒಂದು ಹಂತದಲ್ಲಿ ಪ್ರಭಾಕರ ಕೋರೆ ಮಾತನಾಡುತ್ತಿದ್ದಂತೆ, ಲಿಂಗಾಯತ ಬಣದವರು ಎದ್ದು ನಿಂತು ‘ಇಷ್ಟು ದಿನ ಇಲ್ಲದವರು ಈಗ ಸಮನ್ವಯದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಜೋರು ದನಿಯಲ್ಲಿ ಪ್ರತಿಭಟಿಸಿದರು. ಆಗ ತೀವ್ರ ಗದ್ದಲ, ಗೊಂದಲ ಉಂಟಾಯಿತು. ಇದರಿಂದ ಸಭೆ ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪ, ’ಸಭೆ ಬರ್ಖಾಸ್ತು ಮಾಡಲಾಗುತ್ತಿದೆ’ ಎಂದು ಘೋಷಿಸಿಬಿಟ್ಟರು.

ಕೂಡಲೇ ಮಧ್ಯ ಪ್ರವೇಶಿಸಿದ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ, ಎಲ್ಲರನ್ನೂ ಸಮಾಧಾನಪಡಿಸಿದರು. ‘ಬಹುದಿನಗಳ ನಂತರ ನಡೆಯುತ್ತಿರುವ ಐತಿಹಾಸಿಕ ಸಭೆ ಇದಾಗಿದೆ. ಇದನ್ನು ಈ ರೀತಿ ಕೆಡಿಸಿಬಿಟ್ಟರೆ ಮತ್ತೆ ನಾವು  ಸೇರಲು ಆಗುವುದಿಲ್ಲ. ಈ ರೀತಿ ಕಿತ್ತಾಡಿದರೆ ಬೀದಿಗೆ ಬಿದ್ದಿರುವ ಸಮಾಜವನ್ನು ನೋಡುವವರು ಯಾರು’ ಎಂದು ಪರಿಸ್ಥಿತಿ ತಿಳಿಗೊಳಿಸಿದರು.

ಮೂರು ದಿನಗಳಲ್ಲಿ 10 ತಜ್ಞರ ಸಮಿತಿ
’ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಎರಡೂ ಬಣಗಳು ತಲಾ ಐವರು ತಜ್ಞರ ಹೆಸರನ್ನು ಇನ್ನು ಮೂರು ದಿನಗಳಲ್ಲಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲಿಸಲಿವೆ. 10 ಜನರ ಸಮಿತಿ 7 ರಿಂದ 10 ದಿನಗಳಲ್ಲಿ ವರದಿ ನೀಡಲಿದೆ. ಈ ವರದಿ ಅನುಸಾರ ಮುಂದುವರಿಯಲಾಗುವುದು’ ಎಂದು ಸಭೆಯ ನಂತರ ಶಾಮನೂರು ಶಿವಶಂಕರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

’ತಜ್ಞರ ತಂಡದಲ್ಲಿ ಮಹಾರಾಷ್ಟ್ರದ ನಿವೃತ್ತ ನ್ಯಾಯಮೂರ್ತಿಗಳನ್ನೂ ಸೇರಿಸಿಕೊಳ್ಳಬೇಕು’ ಎಂಬ ಬಯಕೆಯನ್ನು ಕೋರೆ ವ್ಯಕ್ತಪಡಿಸಿದರು.

ಕೋರೆ ಮಾತಿಗೆ ಆಕ್ಷೇಪ
ಒಂದು ಹಂತದಲ್ಲಿ ಪ್ರಭಾಕರ ಕೋರೆ ಮಾತನಾಡುತ್ತಿದ್ದಂತೆ, ಲಿಂಗಾಯತ ಬಣದವರು ಎದ್ದು ನಿಂತು ‘ಇಷ್ಟು ದಿನ ಇಲ್ಲದವರು ಈಗ ಸಮನ್ವಯದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಜೋರು ದನಿಯಲ್ಲಿ ಪ್ರತಿಭಟಿಸಿದರು. ಆಗ ತೀವ್ರ ಗದ್ದಲ, ಗೊಂದಲ ಉಂಟಾಯಿತು. ಇದರಿಂದ ಸಭೆ ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪ, ’ಸಭೆ ಬರ್ಖಾಸ್ತು ಮಾಡಲಾಗುತ್ತಿದೆ’ ಎಂದು ಘೋಷಿಸಿಬಿಟ್ಟರು.

ಕೂಡಲೇ ಮಧ್ಯ ಪ್ರವೇಶಿಸಿದ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ, ಎಲ್ಲರನ್ನೂ ಸಮಾಧಾನಪಡಿಸಿದರು. ‘ಬಹುದಿನಗಳ ನಂತರ ನಡೆಯುತ್ತಿರುವ ಐತಿಹಾಸಿಕ ಸಭೆ ಇದಾಗಿದೆ.

ಇದನ್ನು ಈ ರೀತಿ ಕೆಡಿಸಿಬಿಟ್ಟರೆ ಮತ್ತೆ ನಾವು  ಸೇರಲು ಆಗುವುದಿಲ್ಲ. ಈ ರೀತಿ ಕಿತ್ತಾಡಿದರೆ ಬೀದಿಗೆ ಬಿದ್ದಿರುವ ಸಮಾಜವನ್ನು ನೋಡುವವರು ಯಾರು’ ಎಂದು ಪರಿಸ್ಥಿತಿ ತಿಳಿಗೊಳಿಸಿದರು.

**
ನಾವು ಕುಸ್ತಿ ಆಡುವುದು ಬೇಡ. ಒಗ್ಗಟ್ಟಿನಿಂದ ಅಂದುಕೊಂಡಿದ್ದನ್ನು ಸಾಧಿಸೋಣ.
–ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈ ಮಹಾಸಭಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT