ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೃದಯಾಘಾತ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ವಾಯುಮಾಲಿನ್ಯ?

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಯುಮಾಲಿನ್ಯದಿಂದಾಗಿ ಹೃದಯಾಘಾತ ಪ್ರಮಾಣ ಹೆಚ್ಚುತ್ತಿದೆಯೇ? ಹೌದು ಎನ್ನುತ್ತಾರೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌.ಮಂಜುನಾಥ್‌.

‘ಹೃದಯಾಘಾತದ ಚಿಕಿತ್ಸೆಗಾಗಿ ನಮ್ಮ ಸಂಸ್ಥೆಯ ತುರ್ತು ನಿಗಾ ಘಟಕಕ್ಕೆ ದಾಖಲಾದವರ ಪೈಕಿ ಶೇ 20ರಷ್ಟು ಮಂದಿ ವಾಯುಮಾಲಿನ್ಯದಿಂದಾಗಿಯೇ ಈ ಸಮಸ್ಯೆ ಎದುರಿಸಿದ್ದಾರೆ. ವಾಯುಮಾಲಿನ್ಯದಿಂದ ಹೃದಯಾಘಾತಕ್ಕೆ ಒಳಗಾಗುವವರಲ್ಲಿ ಹೆಚ್ಚಿನವರು ಚಾಲಕರು’ ಎನ್ನುತ್ತಾರೆ ಅವರು.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ ಈ ಕುರಿತು ವಿಶೇಷ ಅಧ್ಯಯನ ನಡೆಸಲು ಮುಂದಾಗಿದೆ. 500 ರಿಕ್ಷಾ ಚಾಲಕರು ಹಾಗೂ 500 ಸಂಚಾರ ಪೊಲೀಸರ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಣೆಗೆ ಒಳಪಡಿಸಲಿದೆ.

‘ಸಲ್ಫರ್‌ ಡೈ ಆಕ್ಸೈಡ್‌, ಕಾರ್ಬನ್‌ ಮಾನಾಕ್ಸೈಡ್‌, ನೈಟ್ರೋಜನ್‌ ಡೈ ಆಕ್ಸೈಡ್‌, ಸೀಸದಂತಹ ವಿಷಕಾರಿ ಅಂಶಗಳು ಗಾಳಿಯಲ್ಲಿ ಸೇರಿಕೊಂಡಿವೆ. ಇದಕ್ಕೆ ಪ್ರಮುಖ ಕಾರಣ ವಾಹನಗಳು ಹೊರಸೂಸುವ ಹೊಗೆ’ ಎಂದು ಸಾಕ್ರ ಆಸ್ಪತ್ರೆಯ ಕಾರ್ಡಿಯೊ–ಥೊರಾಸಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಆದಿಲ್ ಸಿದ್ಧಿಕ್‌ ವಿವರಿಸಿದರು.

‘ವ್ಯಕ್ತಿಯು ಏಕಕಾಲಕ್ಕೆ ಎಷ್ಟು ಪ್ರಮಾಣದ ಗಾಳಿಯನ್ನು ಉಸಿರಾಡುತ್ತಾನೆ, ಅದನ್ನು ಎಷ್ಟು ಹೊತ್ತು ಶ್ವಾಸಕೋಶದಲ್ಲಿ ಹಿಡಿದಿಟ್ಟುಕೊಳ್ಳುತ್ತಾನೆ ಎಂಬುದನ್ನೂ ಪರಿಗಣಿಸಬೇಕು. ಚಾಲಕರು, ಕೈಗಾರಿಕಾ ಪ್ರದೇಶಗಳ ಆಸುಪಾಸಿನಲ್ಲಿ ವಾಸಿಸುವವರು ಈ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ನಾರಾಯಣ ಹೃದಯಾಲಯದ ಹೃದಯ ಕಸಿ ತಜ್ಞ ಡಾ. ಭಗೀರಥ್‌ ರಘುರಾಮನ್‌.

‘ಹೃದಯದ ಸಮಸ್ಯೆ ಹೊಂದಿರುವವರು ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಿಂದ ದೂರ ಉಳಿಯುವುದು ಒಳ್ಳೆಯದು. ಅಲ್ಪ ಪ್ರಮಾಣದಲ್ಲಿ ವಿಷಪೂರಿತ ಗಾಳಿಯನ್ನು ಉಸಿರಾಡಿದರೂ ಅವರು ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ’ ಎಂದರು. 

ಗಾಳಿಯಲ್ಲಿ ತೇಲಾಡುವ ಕಣಗಳು ದೇಹವನ್ನು ಸೇರಿ ಶೇಖರಣೆಗೊಳ್ಳುತ್ತವೆ. ಇವು ರಕ್ತನಾಳಗಳಲ್ಲಿ ರಕ್ತದ ಹರಿವಿಗೆ ಅಡ್ಡಿಪಡಿಸುವುದಲ್ಲದೇ ಉರಿಯೂತ ಸೃಷ್ಟಿಸಬಲ್ಲವು ಎನ್ನುತ್ತಾರೆ ವೈದ್ಯರು.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 2016ರ ಏಪ್ರಿಲ್‌ನಲ್ಲಿ ಎಲ್ಲ 15 ನಿಗಾ ಕೇಂದ್ರಗಳ ಬಳಿ ಸಾಧಾರಣ ಪ್ರಮಾಣದ ವಾಯುಮಾಲಿನ್ಯ ಇತ್ತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಇಷ್ಟು ವಾಯುಮಾಲಿನ್ಯವೂ ಮಕ್ಕಳು ಹಾಗೂ ದೊಡ್ಡವರಲ್ಲಿ ಉಸಿರಾಟದ ಸಮಸ್ಯೆಗೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಲ್ಲದು.

2017ರ ಮಾರ್ಚ್‌ನಲ್ಲಿ ಆರು ನಿಗಾ ಕೇಂದ್ರಗಳ ಬಳಿ ವಾಯುಮಾಲಿನ್ಯ ಸಾಧಾರಣ ಪ್ರಮಾಣದಲ್ಲಿ ಇರುವುದು ಕಂಡುಬಂದಿತ್ತು. ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಹೊಸೂರು ರಸ್ತೆ, ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌, ವೈಟ್‌ಫೀಲ್ಡ್‌ ರಸ್ತೆ, ಕೆಎಚ್‌ಬಿ ಕೈಗಾರಿಕಾ ಪ್ರದೇಶ, ಯಲಹಂಕ, ಸ್ವಾನ್‌ ಸಿಲ್ಕ್‌ ಪ್ರೈವೇಟ್‌ ಲಿಮಿಟೆಡ್‌, ಪೀಣ್ಯ, ಅರ್ಬನ್‌ ಇಕೊ ಪಾರ್ಕ್‌, ಟೆರ್ರಿ ಕಚೇರಿ, ಹಳೆ ವಿಮಾನ ನಿಲ್ದಾಣ ರಸ್ತೆ ಪ್ರದೇಶಗಳಲ್ಲಿ ವಾಯುಮಾಲಿನ್ಯ ಇತ್ತು.

‘ವಾಹನಗಳು ಹೆಚ್ಚು ವೇಗವಾಗಿ ಸಂಚರಿಸುವುದಕ್ಕೆ ಅವಕಾಶ ಸಿಕ್ಕರೆ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ’ ಎಂದ ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT