ನವದೆಹಲಿ: ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ಪರಿಶೀಲನೆ ನಡೆಸದೆ ಆರೋಪಿಗಳನ್ನು ತಕ್ಷಣ ಬಂಧಿಸಬಾರದು’ ಎಂದು ಈ ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಪುನರುಚ್ಛರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
‘ಮಹಿಳೆಯರು ನೀಡುವ ದೂರನ್ನು ನಾಗರಿಕ ಸಮಾಜದ ಸದಸ್ಯರು ಇರುವ ಸಮಿತಿ ಪರಿಶೀಲಿಸಬೇಕು. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿಯೂ ಸಮಿತಿಯನ್ನು ರಚಿಸಬೇಕು. ಸಮಿತಿಯಲ್ಲಿ ನಾಗರಿಕ ಸಮಾಜದ ಸದಸ್ಯರು, ಅಧಿಕಾರಿಗಳ ಪತ್ನಿಯರು, ನಿವೃತ್ತ ಅಧಿಕಾರಿಗಳು ಮತ್ತು ಕಾನೂನು ಸ್ವಯಂ ಸೇವಕರು ಇರಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಕಳೆದ ಜುಲೈ 27ರಂದು ನೀಡಿದ್ದ ಈ ತೀರ್ಪಿಗೆ ಮಹಿಳಾ ಮತ್ತು ಪುರುಷರ ಹಕ್ಕು ರಕ್ಷಣಾ ಹೋರಾಟಗಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಮಹಿಳಾ ಹಕ್ಕು ಹೋರಾಟಗಾರರು, ಈ ತೀರ್ಪು ವರದಕ್ಷಿಣೆ ಸಮಸ್ಯೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲಿವೆ ಎಂದು ಟೀಕಿಸಿದ್ದರು.
ಮತ್ತೊಂದು ಗುಂಪು ‘ಈ ಆದೇಶ ಕಾನೂನು ಸೌಲಭ್ಯಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಶ್ಲಾಘಿಸಿತ್ತು.
‘ಅನಗತ್ಯ ಬಂಧನ ಅಥವಾ ಒರಟು ವಿಚಾರಣೆಯಿಂದ ರಕ್ಷಣೆ ಒದಗಿಸಲು ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ’ ಎಂದು ನ್ಯಾಯಾಲಯ ಆಗ ಹೇಳಿತ್ತು.