ಕೊಪ್ಪಳ: ‘ಹೈದರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಗೆ ₹88.68 ಕೋಟಿ ಅನುದಾನ ಬಿಡುಗಡೆಯಾಗಿದೆ. ತ್ವರಿತವಾಗಿ ಕಾಮಗಾರಿ ಆರಂಭಿಸಿ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಕಾಮಗಾರಿಗಳ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಹೈದರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2013- 14ನೇ ಸಾಲಿನಲ್ಲಿ ₹13.54 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, 100 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
2014-15ನೇ ಸಾಲಿನಲ್ಲಿ ₹73.11 ಕೋಟಿ ಅನುದಾನದಲ್ಲಿ 261 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅದರಲ್ಲಿ 252 ಕಾಮಗಾರಿಗಳು ಪೂರ್ಣಗೊಂಡಿವೆ. 2015-16ನೇ ಸಾಲಿನಲ್ಲಿ ₹69.86 ಕೋಟಿ ಅನುದಾನದಲ್ಲಿ 328 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
268 ಕಾಮಗಾರಿಗಳು ಪೂರ್ಣಗೊಂಡಿವೆ. 2016-17ನೇ ಸಾಲಿನಲ್ಲಿ ₹56.98 ಕೋಟಿ ಹಾಗೂ ₹30.32 ಕೋಟಿ ಅನುದಾನದಲ್ಲಿ 331 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, 189 ಕಾಮಗಾರಿಗಳು ಪೂರ್ಣಗೊಂಡಿವೆ. 2017-18ನೇ ಸಾಲಿನಲ್ಲಿ 424 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹88.68 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೂ ಯಾವುದೇ ಕಾಮಗಾರಿಗಳು ಆರಂಭಗೊಂಡಿಲ್ಲ. ನವೆಂಬರ್ನಲ್ಲಿ ಪ್ರಸಕ್ತ ಸಾಲಿನ ಎಲ್ಲ ಕಾಮಗಾರಿಗಳು ಆರಂಭಗೊಳ್ಳಬೇಕು' ಎಂದು ಸೂಚಿಸಿದರು.
ಮೈಕ್ರೋ ಯೋಜನೆ: ಹೈದರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ₹78 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಎಂಜಿನಿಯರಿಂಗ್ ಕಾಲೇಜಿಗೆ ₹20 ಕೋಟಿ, ಗಾಣಾಧಾಳ, ಬಿನ್ನಾಳ, ಚಿಕ್ಕಮ್ಯಾಗೇರಿ, ಇಂದರಗಿ ಗ್ರಾಮಗಳಲ್ಲಿ ಹೊಸ ಪದವಿಪೂರ್ವ ಕಾಲೇಜು ಹಾಗೂ ವಣಗೇರಿ, ಮುರಡಿ, ಹಿರೆನಂದಿಹಾಳ ಮತ್ತು ಹಾಲವರ್ತಿ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು ನಿರ್ಮಾಣ ಮಾಡಲು ₹10 ಕೋಟಿ, ಕೊಪ್ಪಳ ನಗರದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕಾಗಿ ₹ 10 ಕೋಟಿ, ಕನಕಗಿರಿ ರಸ್ತೆ ನಿರ್ಮಾಣಕ್ಕಾಗಿ ₹ 10 ಕೋಟಿ, ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ₹ 8 ಕೋಟಿ, ವಸತಿ ಕಾಲೇಜು ನಿರ್ಮಾಣಕ್ಕೆ ₹ 8 ಕೋಟಿ, ಕುಕನೂರು ಹೊಸ ಬಸ್ನಿಲ್ದಾಣ ನಿರ್ಮಾಣಕ್ಕಾಗಿ ₹ 6 ಕೋಟಿ, ಗಂಗಾವತಿ ರಸ್ತೆ ನಿರ್ಮಾಣಕ್ಕಾಗಿ ₹ 5 ಕೋಟಿ ಸೇರಿದಂತೆ ಒಟ್ಟು ₹78 ಕೋಟಿ ಅನುದಾನವನ್ನು ಹೈದರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಲ್ಲಿ ನೀಡಲಾಗಿದೆ’ ಎಂದು ರಾಯರಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ಉಪ ವಿಭಾಗಾಧಿಕಾರ ಗುರುದತ್ ಹೆಗ್ಡೆ, ಜಿ.ಪಂ ಉಪಕಾರ್ಯದರ್ಶಿ ಎನ್.ಕೆ ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ , ತಹಶೀಲ್ದಾರ್ ಗುರುಬಸವರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.