ರಾಯಬಾಗ: ‘ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳು ಬಹುತೇಕ ಭರ್ತಿಯಾಗಿವೆ. ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಹುಲ್ಯಾಳ ಕೆರೆಯಲ್ಲಿ 0.75 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಿದೆ’ ಎಂದು ತಹಶೀಲ್ದಾರ ಕೆ.ಎನ್.ರಾಜಶೇಖರ ಹೇಳಿದರು.
‘ಪಟ್ಟಣದ ಹುಲ್ಯಾಳ ಕೆರೆಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ‘ಕಳೆದ ವಾರದಿಂದ ತಾಲ್ಲೂಕಿನಲ್ಲಿ ಸುಮಾರು 42 ಮಿ.ಮೀ. ನಷ್ಟು ಮಳೆಯಾಗಿದೆ. ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಕೊಳಚೆ ಮನೆಗಳಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.
‘ಚರಂಡಿ ನೀರು ಸರಾಗವಾಗಿ ಹರಿಯದೇ ಇದ್ದರಿಂದ ರಸಗೊಬ್ಬರ ಅಂಗಡಿ ಹಾಗೂ ಮನೆಗಳಿಗೆ ಕೊಳಚೆ ನುಗ್ಗಿದ್ದ. ಚರಂಡಿ ಒತ್ತುವರೆ ಮಾಡಿರುವುದೇ ಇದಕ್ಕೆ ಕಾರಣ. ಶುಕ್ರವಾರ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಸುಮಾರು 40 ಮನೆಗಳು ಬಿದ್ದಿವೆ’ ಎಂದರು.
ಕೃಷಿ ಅಧಿಕಾರಿ ಸಿ.ಆರ್.ಮನ್ನಿಕೇರಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದು ನಾವಿ, ಬೀರಪ್ಪ ಕುರಿ, ಕಲ್ಲಪ್ಪ ಹಳಿಂಗಳಿ, ಎಂಜಿನಿಯರ್ ಎಸ್.ಆರ್. ಚೌಗಲಾ ಇದ್ದರು.