ಪಾವಗಡ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಗೆ ಭಾಗಶಃ 41 ಮನೆಗಳು ಬಿದ್ದಿವೆ. ಹಲವೆಡೆ ಶೇಂಗಾ, ತೊಗರಿ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮದ ಸಣ್ಣಪ್ಪ ಎಂಬುವರು ಕಟಾವು ಮಾಡಿದ ಶೇಂಗಾ ಬಳ್ಳಿ ಕೊಚ್ಚಿ ಹೋಗಿ ಹಳ್ಳದ ಮೂಲಕ ಕೆರೆ ಸೇರಿದೆ.
ಹಳ್ಳದ ಗಿಡ ಪೊದೆಗಳಲ್ಲಿ ಸಿಕ್ಕಿಕೊಂಡಿದ್ದ ಬಳ್ಳಿಯನ್ನು ಕುಟುಂಬ ಸದಸ್ಯರು ಸಂಗ್ರಹಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. 3 ಎಕರೆ ಪ್ರದೇಶದಲ್ಲಿ ಶೇಂಗಾ, ತೊಗರಿ ಬೆಳೆದಿದ್ದೆ. ಕಟಾವು ಮಾಡಿ ಜಮೀನಿನಲ್ಲಿಯೇ ಬಿಡಲಾಗಿತ್ತು.
ಮಳೆಯಿಂದಾಗಿ 1 ಬಂಡಿಯಷ್ಟು ಶೇಂಗಾ ಬಳ್ಳಿ ಕೊಚ್ಚಿ ಹೋಗಿದೆ. ತೊಗರಿ ಬಾಗಿದೆ. ಇದರಿಂದ ₹ 30 ಸಾವಿರ ನಷ್ಟವಾಗಿದೆ ಎಂದು ರೈತ ಸಣ್ಣಪ್ಪ ಅಳಲನ್ನು ತೋಡಿಕೊಂಡರು.