ಹುಣಸಗಿ: ಸಮೀಪದ ರಾಯನಗೋಳ ಗ್ರಾಮದಲ್ಲಿ ಮಕ್ಕಳು ಸೇರಿದಂತೆ ಏಳಕ್ಕೂ ಹೆಚ್ಚು ಜನರಿಗೆ ಡೆಂಗಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ‘ಕೆಲವರಿಗೆ ಅತಿಯಾದ ಜ್ವರ ಕಾಣಿಸಿಕೊಂಡರೂ ಗ್ರಾಮದತ್ತ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮದ ಹುಸೇನಸಾಬ, ರಂಗಪ್ಪ ದೇಸಾಯಿ ಆರೋಪಿಸಿದರು.
ಕೊಡೇಕಲ್ಲ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯಕ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಾಜಿ, ಜ್ವರದಿಂದ ಬಳಲುತ್ತಿರುವವರ ಮನೆಗೆ ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಗ್ರಾಮದ ಚರಂಡಿ, ತೆರೆದ ಬಾವಿ ಹಾಗೂ ಮಲೀನ ಪ್ರದೇಶಕ್ಕೆ ಭೇಟಿ ನೀಡಿ ಮಲೀನ ನೀರು ಶೇಖರಣೆಯಾಗಿರುವುದಕ್ಕೆ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ನಾಯಕ, ‘ಗ್ರಾಮದಲ್ಲಿ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿವೆ. ಪಂಚಾಯಿತಿ ಸದಸ್ಯರು ನೈರ್ಮಲ್ಯಕ್ಕೆ ಒತ್ತು ನೀಡಿಲ್ಲ. ಇದರಿಂದ ನೀರು ಶೇಖರಣೆಗೊಂಡು ಸೊಳ್ಳೆ, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ’ ಎಂದು ಹೇಳಿದರು.
‘ಕೂಡಲೇ ಜೋಗುಂಡಭಾವಿ ಗ್ರಾ.ಪಂ ವತಿಯಿಂದ ಜಾಗೃತಿ ಮೂಡಿಸುವ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಸಿಂಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಕೊಡೇಕಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಧರ್ಮರಾಜ ಹೊಸಮನಿ ಹಾಗೂ ಸಿಬ್ಬಂದಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಾಜಿ ಚವ್ಹಾಣ, ತಿರುಪತಿ ಚವ್ಹಾಣ, ಬಸವರಾಜ ಅಂಗಡಿ, ಪೀರಪ್ಪ ಜಾಧವ, ಹುಲಗಪ್ಪ, ಅಲಿಸಾಬ, ಮಹೇಶ, ಹನುಮಪ್ಪ ಇದ್ದರು.