ಮೈಸೂರು: ‘ಮೋಡ ಬಿತ್ತನೆ ಮಾಡಿದ್ರೆ ಇಷ್ಟು ಮಳೆ ಬರುತ್ತೇನ್ರಿ. ಹಾಗಿದ್ದರೆ ಮಳೆ ಬರದೆ ಇರುವಾಗಲೆಲ್ಲ ಮೋಡ ಬಿತ್ತನೆ ಮಾಡಬಹುದಿತ್ತಲ್ವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಪ್ರಶ್ನಿಸಿದರು.
ನಗರದ ಪಡುವಾರಹಳ್ಳಿಯಲ್ಲಿ ಮಳೆನೀರು ನುಗ್ಗಿದ್ದ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಇಷ್ಟೆಲ್ಲಾ ಸಮಸ್ಯೆಗೆ ಮೋಡ ಬಿತ್ತನೆಯೇ ಕಾರಣ’ ಎಂಬ ಸಾರ್ವಜನಿಕರೊಬ್ಬರ
ಆರೋಪಕ್ಕೆ ಅವರು ಸಿಡಿಮಿಡಿಗೊಂಡರು.
‘ಬೆಂಗಳೂರಿನಲ್ಲಿ ಮೋಡ ಬಿತ್ತನೆ ಮಾಡಿಯೇ ಇಲ್ಲ. ಗದಗ, ಯಾದಗಿರಿಯಲ್ಲಿ ಮಾತ್ರ ಈ ಪ್ರಯೋಗ ನಡೆದಿದೆ. ಮೋಡಬಿತ್ತನೆಗೂ, ಪ್ರವಾಹದ ಪರಿಸ್ಥಿತಿ ಉಂಟಾಗಿರುವುದಕ್ಕೂ ಸಂಬಂಧವಿಲ್ಲ’ ಎಂದರು.
‘ಬೆಂಗಳೂರಿನಲ್ಲಿ 110 ವರ್ಷಗಳ ಬಳಿಕ ಭಾರಿ ಮಳೆ ಸುರಿದಿದೆ. ಕುರಬರಹಳ್ಳಿ ಕಂದಾಯ ಬಡಾವಣೆಯಾಗಿದ್ದು, ಯೋಜಿತವಾಗಿ ನಿರ್ಮಾಣಗೊಂಡಿಲ್ಲ. ರಾಜಕಾಲುವೆ ಪಕ್ಕದಲ್ಲಿ ಇರುವ ಬಡವರ ಮನೆಗಳನ್ನು ಒಡೆದು ಹಾಕಲು ಆಗುವುದಿಲ್ಲ’ ಎಂದು ಹೇಳಿದರು.