ಧಾರವಾಡ: ‘ಸಮಗ್ರ ಕೃಷಿ ಪದ್ಧತಿಗಳನ್ನು ರೈತ ಬಾಂಧವರು ಅಳವಡಿಸಿಕೊಂಡರೆ ಮಾತ್ರ ಲಾಭದಾಯಕ ಕೃಷಿ ಹಾಗೂ ಹೆಚ್ಚಿನ ಉತ್ಪಾದನೆ ಸಾಧ್ಯ’ ಎಂದು ಕೃಷಿ ತಜ್ಞ ಮಲ್ಲಣ್ಣ ನಾಗರಾಳ ಹೇಳಿದರು.
ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ‘ವಿಶ್ವ ಆಹಾರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿಗೆ ಪೂರಕವಾದ ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಮುಂದಾಗಬೇಕು. ಆಗ ಆರ್ಥಿಕ ಸಬಲತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು. ಡಾ. ಬಿ.ಎಚ್. ನಾಗೂರ ಮಾತನಾಡಿ, ‘ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ವಿಜ್ಞಾನಿಗಳೊಂದಿಗೆ ಸಂಪರ್ಕ ಹೊಂದಿರಬೇಕು’ ಎಂದು ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವೈಜ್ಞಾನಿಕ ಅಧಿಕಾರಿ ಡಾ. ವಿ.ಕೆ. ಶ್ರೀನಿವಾಸ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಈಶ್ವರಚಂದ್ರ ಹೊಸಮನಿ ಮಾತನಾಡಿದರು
ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ನಂತರ ಬೆಂಗಳೂರಿನ ಎಚ್ಎಎಲ್ ಸಂಸ್ಥೆಯ ಮಯೂರ ಕಲಾ ಬಳಗದಿಂದ ‘ಬರ’ ನಾಟಕದ ಪ್ರದರ್ಶನಗೊಂಡಿತು.
ಕುಲಪತಿ ಡಾ. ಡಿ.ಪಿ. ಬಿರಾದಾರ, ವಿಸ್ತರಣಾ ನಿರ್ದೇಶಕ ಡಾ. ಎಚ್.ಬಸಪ್ಪ, ಡಾ.ಎಸ್.ಟಿ.ನಾಯಕ, ಡಾ.ಶುಭಾ, ಡಾ. ಎಸ್.ಕೆ.ಗಾಳಿ, ಡಾ.ಎಂ.ಗೋಪಾಲ, ಡಾ.ಬಿ.ಎನ್.ಅರವಿಂದಕುಮಾರ, ಡಾ.ವಿನುತಾ ಮುಕ್ತಾಮಠ ಇದ್ದರು.