ಕಾರವಾರ (ಉತ್ತರ ಕನ್ನಡ): ನವೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ಜರುಗಲಿರುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರದಲ್ಲಿ ತಮ್ಮ ಹೆಸರು ನಮೂದಿಸಬಾರದು ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
ಈ ಸಂಬಂಧ ಸಚಿವರ ಆಪ್ತ ಸಹಾಯಕ ರಮೇಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿಗೆ ಅಕ್ಟೋಬರ್ 14ರಂದು ಪತ್ರ ಬರೆದಿದ್ದಾರೆ.
ಸಚಿವರ ನಿರ್ದೇಶನದ ಮೇರೆಗೆ ಈ ಪತ್ರ ಬರೆದಿದ್ದು, ಜಯಂತಿ ಆಚರಿಸುವ ಎಲ್ಲ ಇಲಾಖೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಈ ಕುರಿತು ತಿಳಿಸುವಂತೆ ಅವರು ಕೋರಿದ್ದಾರೆ. ಕಳೆದ ಬಾರಿ ಕೂಡ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅನಂತಕುಮಾರ್ ಇದೇ ರೀತಿ ಪತ್ರ ಬರೆದಿದ್ದರು.