ಹಾಸನ: ‘ಕಲಾವಿದರು ಮತ್ತು ಸಾಹಿತಿಗಳು ಸೃಜನಶೀಲ ಮನೋಭಾವ ಹೊಂದಿರುತ್ತಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಲೇಖಕ ರಾಜಶೇಖರ್ ಮಠಪತಿ ಹೇಳಿದರು.
ಚಿತ್ಕಲಾ ಫೌಂಡೇಷನ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಹೊಯ್ಸಳ ಚಿತ್ರಕಲಾ ಪರಿಷತ್ತು ಸಹಯೋಗದಲ್ಲಿ ವಿದ್ಯಾನಗರದ ಕಲಾಶ್ರೀ ಗ್ಯಾಲರಿಯಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಷ್ಯಾದ ಅಕಾಡೆಮಿ ಆಫ್ ಆರ್ಟ್ಸ್ ಗೌರವ ಸದಸ್ಯತ್ವ ಪಡೆದಿರುವ ಕೇಂದ್ರ ಲಲಿತಾ ಕಲಾ ಅಕಾಡೆಮಿ ಆಡಳಿತಾಧಿಕಾರಿ ಚಿ.ಸು.ಕೃಷ್ಣಸೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಕಲಾ ವಲಯದಲ್ಲಿ ಗುರುತಿಸಿಕೊಂಡಿರುವ ಕೃಷ್ಣಸೆಟ್ಟಿ ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಕಾಡೆಮಿ ಆಡಳಿತಾಧಿಕಾರಿಯಾಗಿ ದೇಶದ ಕಲಾವಲಯಕ್ಕೆ ಅತ್ಯತ್ತಮ ಕೆಲಸ ಮಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಚಿ.ಸು.ಕೃಷ್ಣಸೆಟ್ಟಿ ಮಾತನಾಡಿ, ಕಲೆ ಪ್ರೋತ್ಸಾಹಿಸಲು ‘ಅಕಾಡೆಮಿ ₹ 60 ಕೋಟಿ ಅನುದಾನ ಮೀಸಲಿರಿಸಿದೆ. ಈ ಹಣವನ್ನು ಕಲಾವಲಯಕ್ಕೆ ಸರಿಯಾದ ರೀತಿಯಲ್ಲಿ ಬಳಸಲಾಗುವುದು. ಇದು ಕನ್ನಡಿಗನಾದ ನನಗೆ ಸಂದ ಗೌರವ’ ಎಂದು ಹೇಳಿದರು.
ಅಂತರರಾಷ್ಟ್ರೀಯ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಕಲಾ ವಲಯದಲ್ಲಿ ಉತ್ತಮ ಕೆಲಸ ಮಾಡುತ್ತಿವ ಕೃಷ್ಣಸೆಟ್ಟಿ ಅವರು ರಷ್ಯಾ ದೇಶದ ಅಕಾಡೆಮಿ ಸದಸ್ಯತ್ವ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.
ಚಿತ್ಕಲಾ ಫೌಂಡೇಷನ್ ಅಧ್ಯಕ್ಷ ಬಿ.ಎಸ್. ದೇಸಾಯಿ ಮಾತನಾಡಿದರು. ಉ.ರ. ನಾಗೇಶ್, ಹೊಯ್ಸಳ ಚಿತ್ರಕಲಾ ಪರಿಷತ್ತಿನ ಸಂಚಾಲಕ ಕೆ.ಎನ್.ಶಂಕರಪ್ಪ ಇದ್ದರು.