ಬೆಂಗಳೂರು: ಬಹುಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಅಬ್ದುಲ್ ಕರೀಂ ಲಾಲ್ ತೆಲಗಿ (66) ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿಯನ್ನು ಅಕ್ಟೋಬರ್ 16ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ರಾತ್ರಿ 8 ಗಂಟೆಯಿಂದ ತೆಲಗಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ‘ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ವೆಂಟಿಲೇಟರ್ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
2001ರಲ್ಲಿ ಬೆಳಕಿಗೆ ಬಂದಿದ್ದ ಈ ಪ್ರಕರಣಗಳ ತನಿಖೆಯನ್ನು 2004ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ 2009–10ರಲ್ಲಿ ವಿಚಾರಣೆ ಪೂರೈಸಿತ್ತು. ವಿವಿಧ ಆರೋಪಗಳಲ್ಲಿ ವಿಚಾರಣಾ ಕೋರ್ಟ್ ತೆಲಗಿಗೆ ಶಿಕ್ಷೆ ವಿಧಿಸಿತ್ತು. ಬಹುಕೋಟಿ ಹಗರಣದ ಅಪರಾಧದ ಹಿನ್ನೆಲೆ ತೆಲಗಿ ಈಗಾಗಲೇ 16 ವರ್ಷದಿಂದ ಜೈಲಿನಲ್ಲಿದ್ದಾನೆ.
ತೆಲಗಿ ಮತ್ತು ಆತನ ಸಹಚರರ ವಿರುದ್ಧದ ಅನೇಕ ಪ್ರಕರಣಗಳು ದೆಹಲಿ, ಅಹಮದಾಬಾದ್, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿವೆ.