ತರೀಕೆರೆ: ಲಿಂಗದಹಳ್ಳಿ ಹೋಬಳಿಯ ಕಲ್ಲತ್ತಿಗಿರಿಯಿಂದ ಹೋಬಳಿಯ ಕೆರೆಗಳಿಗೆ ನೀರು ಒದಗಿಸುತ್ತಿದ್ದ ನಾಗಣ್ಣ ಕಾಲುವೆಯನ್ನು ರೈತರು ಒಡೆದಿರುವ ಘಟನೆ ಈಚೆಗೆ ನಡೆದಿದೆ. ಹಲವು ವರ್ಷಗಳಿಂದ ಈ ಹಳ್ಳದ ನೀರು ಹರಿಯುವ ವಿಚಾರವಾಗಿ ಗ್ರಾಮಸ್ಥರ ನಡುವೆ ಮನಸ್ತಾಪ ಉಂಟಾಗಿ, ಪ್ರತಿಭಟನೆಗಳು ನಡೆದು ನ್ಯಾಯಕ್ಕಾಗಿ ಒತ್ತಾಯಿಸಲಾಗುತ್ತಿತ್ತು.
ಕಲತ್ತಿಗಿರಿಯಿಂದ ಮಳೆಗಾಲದಲ್ಲಿ ಹರಿದು ಬರುವ ನೀರಿನ ಹಳ್ಳಕ್ಕೆ ಗೋಪಾಲಪುರ ಸಮೀಪದ ನಾಗಣ್ಣ ಡ್ಯಾಂ ನಿರ್ಮಿಸಿ ಅಲ್ಲಿಂದ ಲಿಂಗದಹಳ್ಳಿ, ಪಿಳ್ಳಂಗೆರೆ, ಕೆಂಚಾಪುರಕೆರೆ, ಭಗವತಿಕಟ್ಟೆ, ಸುಣ್ಣದಹಳ್ಳಿ ಕೆರೆ ನೀರು ಹರಿಸಲು ನಾಗಣ್ಣ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿತ್ತು.
ಇದೇ ಹಳ್ಳಕ್ಕೆ ಹುಲಿತಿಮ್ಮಾಪುರದ ಬಳಿಯ ಜುಂಜನಕಟ್ಟೆ ಎಂಬಲ್ಲಿ ನೀರನ್ನು ದೊಡ್ಡ ನಿಂಗೇನಹಳ್ಳಿ ಕೆರೆಗೆ ತುಂಬಿಸಲು ಮತ್ತೊಂದು ಕಾಲುವೆಯನ್ನು ನಿರ್ಮಿಸಲಾಗಿತ್ತು. ಉಳಿದಂತೆ ಹಳ್ಳದ ನೀರು ಮುಂದೆ ದೊಡ್ಡ ನಿಂಗೇನಹಳ್ಳಿ ತ್ಯಾಗದ ಬಾಗಿ ಗುಳ್ಳದ ಮನೆ, ಮಲ್ಲಿಗೇನಹಳ್ಳಿ, ಸಮೀಪದಲ್ಲೇ ಹರಿದು ಜಂಬಂಧ ಹಳ್ಳ ಸೇರುತ್ತಿತ್ತು.
ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಲಿಂಗದಹಳ್ಳಿಯ ಮುಷ್ಠಿಕೆರೆ ಹಾಗೂ ಪಿಳ್ಳಯ್ಯನಕೆರೆಗೂ ಈ ಕಾಲುವೆಯಿಂದ ನೀರನ್ನು ತುಂಬಿಸಲಾಗಿತ್ತು. ಇದನ್ನು ತಿಳಿದ ದೊಡ್ಡ ನಿಂಗೇನಹಳ್ಳಿ, ಸುಣ್ಣದಹಳ್ಳಿ ಹಾಗೂ ದೋರನಾಳು, ಗುಳ್ಳದಮನೆ, ತ್ಯಾಗದಬಾಗಿ ಗ್ರಾಮಸ್ಥರು ನಮ್ಮ ಗ್ರಾಮದ ಕೆರೆಗಳಿಗೂ ನೀರು ತುಂಬಿಸುವಂತೆ ಪ್ರತಿಭಟಿಸಿ ಒತ್ತಾಯಿಸಿದ್ದರು.
ನಂತರ ಗ್ರಾಮಸ್ಥರ ಮಧ್ಯೆ ನೀರಿನ ಹಂಚಿಕೆ ಪ್ರಸ್ತಾವ ಶಾಂತಿಯುತವಾಗಿ ನಡೆದಿದ್ದರೂ, ಗ್ರಾಮಸ್ಥರ ಮಧ್ಯೆ ವಿವಾದ ಉಂಟಾಗಿ ಪೊಲೀಸ್ ಇಲಾಖೆಯ ಸಮ್ಮುಖದಲ್ಲಿಯೇ ಕೆಲ ಗ್ರಾಮಸ್ಥರು ಜೆಸಿಬಿಯಿಂದ ಕಾಲುವೆಯನ್ನು ಒಡೆದು ಹಾಕಿದ್ದಾರೆ.