ಯಾದಗಿರಿ: ‘ಆದರ್ಶ ಜೀವನ ನಡೆಸುವ ಮೂಲಕ ಕೊಲ್ಲೂರ ಮಲ್ಲಪ್ಪನವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ’ ಎಂದು ಕೊಲೂರು ಮಲ್ಲಪ್ಪ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಶೈಲ ಪೂಜಾರಿ ಹೇಳಿದರು.
ನಗರದಲ್ಲಿ ಮಂಗಳವಾರ ಕೊಲೂರು ಮಲ್ಲಪ್ಪ ಮೆಮೋರಿಯಲ್ ಶಿಕ್ಷಣ ಸಂಸ್ಥೆ ವತಿಯಿಂದ ಕೊಲೂರು ಮಲ್ಲಪ್ಪ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಹೈದರಾಬಾದ್ ಕರ್ನಾಟಕದ ಗಾಂಧಿ ಎಂದೇ ಚಿರಪರಿಚಿತರಾಗಿದ್ದ ಮಲ್ಲಪ್ಪನವರು ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಒಲಿದು ಬಂದರೂ, ಅದನ್ನು ನಯವಾಗಿ ನಿರಾಕರಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಸ್ವಚಾರಿತ್ರ್ಯವನ್ನು ಇಂದಿನ ಯುವಕರು ಅನುಸರಿಸಬೇಕು’ ಎಂದು ಕರೆ ನೀಡಿದರು.
ನಗರಸಭೆ ಸದಸ್ಯ ಶಶಿಧರರೆಡ್ಡಿ ಹೊಸಳ್ಳಿ ಮಾತನಾಡಿ, ‘ಮಲ್ಲಪ್ಪನವರು ಕುಷ್ಠರೋಗಿಗಳಿಗಾಗಿ ಮಾಡಿದ ಸೇವೆ, ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಅವರ ಹೋರಾಟದ ಕೊಡುಗೆ ಅಪಾರವಾಗಿತ್ತು’ ಎಂದರು.