ಚೆನ್ನೈ: ಅ.18ರಂದು ಬಿಡುಗಡೆಯಾದ ವಿಜಯ್ ನಟನೆಯ ತಮಿಳಿನ ‘ಮರ್ಸಲ್’ ಚಿತ್ರವನ್ನು ರದ್ದುಪಡಿಸಬೇಕೆಂದು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಅಭಿವ್ಯಕ್ತ ಸ್ವಾತಂತ್ರ್ಯಎಲ್ಲರ ಹಕ್ಕಾಗಿದೆ, ಅದು ಸಿನಿಮಾವೇ ಹೊರತು ನಿಜ ಜೀವನವಲ್ಲ, ಎಂದು ಕೋರ್ಟ್ ತಿಳಿಸಿದೆ.
ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಚಿತ್ರದ ಪ್ರದರ್ಶನ ರದ್ದುಪಡಿಸುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ರದ್ದತಿಗೆ ಸಂಬಂಧಿಸಿದ ಕೆಲವು ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ಆಗ್ರಹಿಸಿ ತಮಿಳುನಾಡು ಬಿಜೆಪಿ ಘಟಕ ಹೈಕೋರ್ಟ್ ಮೆಟ್ಟಿಲೇರಿತ್ತು.
ಚಿತ್ರದಲ್ಲಿ ಜಿಎಸ್ಟಿ ತೆರಿಗೆಯನ್ನು ಪ್ರಶ್ನಿಸಲಾಗಿದೆ. ಸಿಂಗಪುರದಲ್ಲಿ ಶೇ 8 ತೆರಿಗೆ ವಿಧಿಸುತ್ತಾರೆ. ಆದರೆ ಭಾರತದಲ್ಲಿ ಶೇ 28 ಏಕೆ ಎಂದು ವಿಜಯ್ ಪ್ರಶ್ನಿಸುತ್ತಾರೆ. ಮದ್ಯವನ್ನು ಜಿಎಸ್ಟಿ ಅಡಿ ಏಕೆ ತಂದಿಲ್ಲ ಎಂದೂ ಕೇಳುತ್ತಾರೆ.
ಈ ಹಿನ್ನೆಲೆಯಲ್ಲಿ ಸಿನಿಮಾದಲ್ಲಿನ ರಾಜಕೀಯ ಪ್ರೇರಿತ ದೃಶ್ಯಗಳನ್ನು ಕೈಬಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಬಿಜೆಪಿ ಎಚ್ಚರಿಕೆ ನೀಡಿತ್ತು.
ಬಿಜೆಪಿ ವಿರೋಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಿ. ಚಿದಂಬರಂ, ನಟ ರಜನಿಕಾಂತ್ ಹಾಗೂ ಕಮಲ್ಹಾಸನ್ ಮರ್ಸಲ್ ಚಿತ್ರವನ್ನು ಬೆಂಬಲಿಸಿದ್ದರು.