ರಂಗಶಂಕರ ‘ನಾಟಕೋತ್ಸವ 17’ ಪ್ರಯುಕ್ತ ‘ರಂಗಶಂಕರ ಕಲೆ ಮತ್ತು ರಂಗಭೂಮಿ ಶಿಬಿರ’ ಅ.28, 29 ಹಾಗೂ ನ.4, 5ರಂದು ನಡೆಯಲಿದೆ. ಶಿಬಿರದ ಸಂಯೋಜನೆಯ ಹೊಣೆಯನ್ನು ಸಂಸ್ಕೃತಿ ಚಿಂತಕ ಸದಾನಂದ ಮೆನನ್ ನಿರ್ವಹಿಸಲಿದ್ದಾರೆ. ಈ ಬಾರಿಯ ನಾಟಕೋತ್ಸವವು ‘ವಾಸ್ತವ’ ಎನ್ನುವ ಪರಿಕ್ಪನೆಯೊಂದಿಗೆ ನಡೆಯಲಿದೆ.
ಅ.28 ಬೆಳಿಗ್ಗೆ 10 ಗಂಟೆಗೆ ಬಹಾವುದ್ದೀನ್ ಡಾಗರ್ ಅವರಿಂದ ‘ದ್ರುಪದ್ ವೀಣಾ’ ವಾದನ ಕಾರ್ಯಕ್ರಮವಿದೆ. ಮಧ್ಯಾಹ್ನ 2ಕ್ಕೆ ಸದಾನಂದ ಮೆನನ್ ಅವರಿಂದ ‘ಕಲೆ’ಯ ಕುರಿತು ಉಪನ್ಯಾಸವಿರುತ್ತದೆ. ಅ.29ರಂದು ಬೆಳಿಗ್ಗೆ 10ಕ್ಕೆ ರಾಜೀವ್ ಮೆನನ್ ಅವರು ‘ಸಿನಿಮಾ’ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಅತುಲ್ ದೋಡಿಯಾ ಅವರು ‘ದೃಶ್ಯ ಮಾಧ್ಯಮ’ ಕುರಿತು ಮಾತನಾಡಲಿದ್ದಾರೆ.
ನ.4ರಂದು ಬೆಳಿಗ್ಗೆ 11ಕ್ಕೆ ‘ನಿರ್ದೇಶಕರ ದುಂಡು ಮೇಜಿನ ಸಂಭಾಷಣೆ’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ‘ಛಾಯಾಚಿತ್ರ’ ವಿಷಯ ಕುರಿತು ಪ್ರಶಾಂತ್ ಪಂಜಿಯಾರ್ ಮಾತನಾಡಲಿದ್ದಾರೆ. ಮಾರನೆಯ ದಿನ, ನ.5ರಂದು ಬೆಳಿಗ್ಗೆ 11ಕ್ಕೆ ಪಂಡಿತ್ ಸತ್ಯಶೀಲ್ ದೇಶಪಾಂಡೆ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮವಿದೆ.
ಇದರ ಜೊತೆಗೆ, ರಂಗಶಂಕರ ಭಾರತದ ಯುವ ರಂಗಕರ್ಮಿಗೆ ನೀಡುವ ‘ಶಂಕರ್ ನಾಗ್ ರಂಗ ಪ್ರಶಸ್ತಿ’ಯನ್ನು ಈ ಬಾರಿ ದೆಹಲಿಯ ಅನುರೂಪ ರಾಯ್ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ನ.4 ರಂದು, ಅಂದಿನ ಪ್ರದರ್ಶನದ ನಂತರ ನೀಡಲಾಗುವುದು.