ಬಸವಾಪಟ್ಟಣ: ಹೋಬಳಿ ಕೇಂದ್ರಕ್ಕೆ ಅಗತ್ಯವಿರುವ ನಾಡ ಕಚೇರಿ ಕಟ್ಟಡವನ್ನು ನಿರ್ಮಿಸಬೇಕು ಎಂದು ಈ ಭಾಗದ ಗ್ರಾಮಗಳ ಜನರು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳಿಂದ ನಾಡಕಚೇರಿಯನ್ನು ತಾತ್ಕಾಲಿಕವಾಗಿ ನೀರಾವರಿ ಇಲಾಖೆಯ ಸಣ್ಣ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಎಲ್ಲ ಕೆಲಸ ಕಾರ್ಯಗಳಿಗೆ ಇಲ್ಲಿ ಸ್ಥಳಾವಕಾಶ ಕಡಿಮೆ ಇದೆ.
ದೈನಂದಿನ ಕಾರ್ಯ ನಿರ್ವಹಿಸಲೂ ಸಿಬ್ಬಂದಿ ಪರದಾಡುತ್ತಿದ್ದಾರೆ. ಪ್ರತಿದಿನ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಜನರಿಗೆ ಇಲ್ಲಿ ನಿಲ್ಲಲೂ ಸ್ಥಳವಿಲ್ಲ. ಇಕ್ಕಟ್ಟಾಗಿರುವ ಈ ಕಟ್ಟಡದಲ್ಲಿ ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ನಿವೇಶನದ ಕೊರತೆಯ ಕಾರಣ ನೀಡಿ ಕಂದಾಯ ಇಲಾಖೆಯು ಕಟ್ಟಡ ನಿರ್ಮಿಸಲು ಮುಂದಾಗಿಲ್ಲ.
ಬಸವಾಪಟ್ಟಣದಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ನಿವಾಸದ ಕಟ್ಟಡ ಸಂಪೂರ್ಣ ಜೀರ್ಣಾವಸ್ಥೆ ತಲುಪಿದೆ. 10 ವರ್ಷಗಳಿಂದ ಖಾಲಿ ಬಿದ್ದಿದೆ. ಅದನ್ನು ತೆರವುಗೊಳಿಸಿ ಅಲ್ಲೇ ನಾಡ ಕಚೇರಿ, ರಾಜಸ್ವ ನಿರೀಕ್ಷಕರ ಮತ್ತು ಗ್ರಾಮ ಲೆಕ್ಕಿಗರ ಕಚೇರಿ ಎಲ್ಲರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮುಖಂಡರು.