ತಾವರಗೇರಾ: ಮುದೇನೂರ ಸಮೀಪದ ರಾಮತ್ನಾಳ-ಮುದೇನೂರ ಮಾರ್ಗ ಮಧ್ಯದಲ್ಲಿರುವ ಕಿರು ಸೇತುವೆಯಲ್ಲಿ ಬೃಹತ್ ಕಲ್ಲು ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ಮಾಕಾಪೂರು ಬಳಿಯ ಕಲ್ಲು ಕ್ವಾರಿಯಿಂದ ಲಾರಿಯಲ್ಲಿ ಈಚೆಗೆ ಅಕ್ರಮವಾಗಿ ಕಲ್ಲು ಸಾಗಿಸಲಾಗುತ್ತಿತ್ತು. ಈ ವೇಳೆ ಲಾರಿ ಸೇತುವೆ ಗುಂಡಿಯಲ್ಲಿ ಸಿಲುಕಿತ್ತು. ಆಗ ಲಾರಿ ಚಾಲಕ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಲ್ಲನ್ನು ಸೇತುವೆ ಮಧ್ಯೆ ಕೆಡವಿ ಲಾರಿ ಸಮೇತ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದರು.
ಕಿರು ಸೇತುವೆಯಲ್ಲಿ ಕಲ್ಲು ಬಿದ್ದಿರುವುದರಿಂದ ವಾಹನ ಸವಾರರು ಪರದಾಡಬೇಕಾಗಿದೆ. ಅಲ್ಲದೆ, ಸ್ಥಿತಿ ಕಂಡು ಕೆಲ ವಾಹನ ಸವಾರರು ಮುದ್ದಲಗುಂದಿ -ಕಿಡದೂರು ಮಾರ್ಗವಾಗಿ ತುರಡಗಿ ಮೂಲಕ 1 ಲಿಂಗಸಗೂರಿಗೆ ಹೋಗುತ್ತಿದ್ದಾರೆ.
ತಾವರಗೇರಾ ಕಡೆ ತೆರಳುವ ಪ್ರಯಾಣಿಕರು ಕಿಡದೂರು ಮತ್ತು ಮುದ್ದಲಗುಂದಿ ಮಾರ್ಗವಾಗಿ 25 ಕಿ.ಮೀ ಹೆಚ್ಚು ಸುತ್ತಾಕಿಕೊಂಡು ತೆರಳಬೇಕಾಗಿದೆ. ಇದರಿಂದ ಪ್ರಯಾಣಿಕರು ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಗಳ ವಿರುದ್ಧ ಹಿಡಿಶಾಪ ಹಾಕಿ, ಪ್ರಯಾಣ ಬೆಳಸುತ್ತಿದ್ದಾರೆ.
‘ಕಳೆದ 5-6 ತಿಂಗಳಿಂದ ರಾತ್ರಿ ವೇಳೆ ಮುದೇನೂರಿನಿಂದ ಜಾಲಿಹಾಳ, ದೋಟಿಹಾಳ ಮೂಲಕ ಕುಷ್ಟಗಿ ಮತ್ತು ಇಲಕಲ್ ನಗರಕ್ಕೆ 5-6ಲಾರಿಗಳು ಕಲ್ಲು ಸಾಗಿಸುತ್ತಿವೆ. ಕ್ರಮ ಕೈಗೊಳ್ಳಬೇಕಾದ ತಾವರಗೇರಾ ಪೊಲೀಸರು ಮೌನ ವಹಿಸಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.
ಭಾರೀ ಗಾತ್ರದ ಕಲ್ಲು ರಸ್ತೆ ಮಧ್ಯೆ ಬಿದ್ದು ಎರಡು-ಮೂರು ದಿನಗಳು ಕಳೆದರೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಕಾರಿಗಳು ಇತ್ತ ಸುಳಿದು ಕಲ್ಲನ್ನು ಸ್ಥಳಾಂತರ ಮಾಡಿಲ್ಲ.
ಅಂಗವಿಕಲರೊಬ್ಬರು ಈ ಮಾರ್ಗದಲ್ಲಿ ಹೋಗುತ್ತಿದ್ದಾಗ ಕಲ್ಲು ಇದ್ದುದನ್ನು ಕಂಡು ಮಾರ್ಗ ಬದಲಿಸಲು ಹೋಗು ತ್ರೀಚಕ್ರ ವಾಹನ ಮುಗುಚಿ ಬಿದ್ದಿದ್ದಾರೆ. ಸಂಬಂಧಪಟ್ಟವರು ಗಮನ ಹರಿಸಿ ಕಲ್ಲು ಸ್ಥಳಾಂತರಿಸಬೇಕು ಎಂದು ಕುಷ್ಟಗಿ ವಿಕಲಚೇತನರ ತಾಲ್ಲೂಕು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ಕುಂಬಾರ ಒತ್ತಾಯಿಸಿದರು.